ADVERTISEMENT

ಜನಜಾಗೃತಿಗಾಗಿ ರಾಜ್ಯದಾದ್ಯಂತ ಕೆಆರ್‌ಎಸ್‌ ಯಾತ್ರೆ

ಶಿಡ್ಲಘಟ್ಟ, ಚಿಕ್ಕಬಳ್ಳಾಪುರದಲ್ಲಿ ‘ಚಲಿಸು ಕರ್ನಾಟಕ’ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸೈಕಲ್ ಯಾತ್ರೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 16:21 IST
Last Updated 15 ಸೆಪ್ಟೆಂಬರ್ 2020, 16:21 IST
ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಕೆಆರ್‌ಎಸ್‌ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಪಕ್ಷದ ಪದಾಧಿಕಾರಿಗಳೊಂದಿಗೆ ಸೈಕಲ್ ಯಾತ್ರೆ ನಡೆಸಿದರು.
ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಕೆಆರ್‌ಎಸ್‌ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಪಕ್ಷದ ಪದಾಧಿಕಾರಿಗಳೊಂದಿಗೆ ಸೈಕಲ್ ಯಾತ್ರೆ ನಡೆಸಿದರು.   

ಚಿಕ್ಕಬಳ್ಳಾಪುರ: ‘ರಾಜ್ಯದ ಜನರಿಗೆ ನಿಷ್ಠೆ, ಪ್ರಾಮಾಣಿಕತೆ ಮತ್ತು ಜನಹಿತ ರಾಜಕಾರಣದ ಬಗ್ಗೆ ತಿಳಿಸುವ ಜತೆಗೆಭ್ರಷ್ಟಾಚಾರ ನಿರ್ಮೂಲನೆ ಜನಜಾಗೃತಿ ಮತ್ತು ಸಂಘಟನೆಗಾಗಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷ ರಾಜ್ಯದಾದ್ಯಂತ ಸೈಕಲ್ ಯಾತ್ರೆ ಹಮ್ಮಿಕೊಂಡಿದೆ’ ಎಂದು ಕೆಆರ್‌ಎಸ್‌ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.

ನಗರದಲ್ಲಿ ಮಂಗಳವಾರ ‘ಚಲಿಸು ಕರ್ನಾಟಕ’ ಕೆಆರ್‌ಎಸ್‌ ಸೈಕಲ್ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಾಡಿನ ಜನರು ಆಡಳಿತ ಮತ್ತು ವಿರೋಧ ಪಕ್ಷಗಳ ಆಡಳಿತ ವ್ಯವಸ್ಥೆ ನೋಡಿ ರೋಸಿ ಹೋಗಿದ್ದು, ಕೊರೊನಾ ಹೆಸರಿನಲ್ಲಿ ಲೂಟಿ ಹೊಡೆಯುತ್ತಿರುವ ಬಿಜೆಪಿ ಸರ್ಕಾರ ಹಾಗೂ ಅವ್ಯವಸ್ಥೆ ವಿರುದ್ದ ಸರಿಯಾಗಿ ಧ್ವನಿ ಎತ್ತದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ನೊಂದಿರುವ ಜನರ ಅವಶ್ಯಕತೆ ಮತ್ತು ನಾಡಿ ಮಿಡಿತವನ್ನು ಅರಿಯುವ ಉದ್ದೇಶದಿಂದ ಈ ಯಾತ್ರೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಚಲಿಸು ಕರ್ನಾಟಕ ಹೆಸರಿನಲ್ಲಿ 2,700 ಕೀ.ಮೀ.ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಮೊದಲ ಹಂತದ 15 ದಿನಗಳ ಯಾತ್ರೆಗೆ ಸೆಪ್ಟೆಂಬರ್ 14ರಂದು ಕೋಲಾರದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಯಾತ್ರೆ ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಬೆಂಗಳೂರು, ರಾಮನಗರ, ಜಿಲ್ಲೆಗಳ ಮೂಲಕ ಸಾಗಿ ಸೆ.18ರಂದು ಮದ್ದೂರು ಮತ್ತು ಸೆ.19ರಂದು ಮಂಡ್ಯವನ್ನು ತಲುಪಲಿದೆ’ ಎಂದರು.

‘ನಂತರ ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಗುವ ಸೈಕಲ್ ಯಾತ್ರೆಯ ಸಮಾರೋಪ ಕಾರ್ಯಕ್ರಮವು ಸೆ.18ರಂದು ತುಮಕೂರಿನ ಶಿರಾದಲ್ಲಿ ನಡೆಯಲಿದೆ’ ಎಂದು ಹೇಳಿದರು.

‘ಅಂತಿಮ ಹಂತದ ಯಾತ್ರೆ ನ. 23ರಂದು ಬೆಳಗಾವಿಯಿಂದ ಪ್ರಾರಂಭವಾಗಿ ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಆಸಕ್ತರು www.krsparty.org/registration/cylcle.php ಜಾಲತಾಣದ ಲಿಂಕ್ ಮೂಲಕ ಯಾತ್ರೆಗೆ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು’ ಎಂದರು.

ಬೆಳಿಗ್ಗೆ ಶಿಡ್ಲಘಟ್ಟ ನಗರದಲ್ಲಿ ಆರಂಭವಾದ ಸೈಕಲ್‌ ಯಾತ್ರೆ ಬಳಿಕ ಚಿಕ್ಕಬಳ್ಳಾಪುರದ ಪ್ರಮುಖ ರಸ್ತೆಗಳಲ್ಲಿ ಒಂದು ಸುತ್ತು ಹಾಕಿ, ತಾಲ್ಲೂಕಿನ ಮುದ್ದೇನಹಳ್ಳಿ, ನಂದಿ ಮೂಲಕ ದೇವನಹಳ್ಳಿಗೆ ಸಾಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.