ADVERTISEMENT

ತರಗತಿ ಆರಂಭ: ವಿದ್ಯಾರ್ಥಿಗಳ ಸಂಭ್ರಮ

ಕೊರೊನಾ ನಿಯಮ ಪಾಲಿಸುವಂತೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 3:54 IST
Last Updated 27 ಜುಲೈ 2021, 3:54 IST
ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರೊ.ವೈ.ನಾರಾಯಣರವರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು
ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರೊ.ವೈ.ನಾರಾಯಣರವರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು   

ಬಾಗೇಪಲ್ಲಿ: ಲಾಕ್‌ಡೌನ್‌ನಿಂದ 3 ತಿಂಗಳಿಂದ ಮುಚ್ಚಿದ್ದ ಕಾಲೇಜುಗಳನ್ನು ಸೋಮವಾರ ತೆರೆಯಲು ಸರ್ಕಾರ ಅವಕಾಶ ನೀಡಿದೆ. ಇದರಿಂದ ಪಟ್ಟಣದ 3 ಪದವಿ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾದರು. ತಮ್ಮ ಸ್ನೇಹಿತರೊಡನೆ ಸೇರಿ ಸಂಭ್ರಮಿಸಿದರು.

ಭಾನುವಾರವೇ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯಾಷನಲ್ ಪದವಿ, ವಿಕಾಸ ಪದವಿ ಕಾಲೇಜುಗಳ ಆವರಣ ಹಾಗೂ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಲಾಗಿತ್ತು. ಕಾಲೇಜುಗಳ ಮುಂದೆ ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದಿರುವ ಮಾಹಿತಿ ಸಂಗ್ರಹಿಸಿದರು. ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಕಾಲೇಜಿನೊಳಗೆ ಪ್ರವೇಶ ನೀಡಲಾಯಿತು.

ಕಾಲೇಜುಗಳ ಪ್ರಾಧ್ಯಾಪಕರು, ಉಪನ್ಯಾಸಕರು ವಿದ್ಯಾರ್ಥಿಗಳನ್ನು ಅಂತರದಲ್ಲಿ ಕೂರಿಸಿ ಬೋಧನೆ ಮಾಡಿದರು. ಮೊದಲ ದಿನದಲ್ಲಿ ವಿದ್ಯಾರ್ಥಿಗಳ ಹಾಜರಾತಿಕಡಿಮೆ ಇತ್ತು.

ADVERTISEMENT

‘ಕಾಲೇಜು ಪುನರಾರಂಭ ಆಗುತ್ತಿರುವುದು ಸಂತಸ ತಂದಿದೆ. ಆನ್‍ಲೈನ್ ಶಿಕ್ಷಣ ಪದ್ಧತಿಯಿಂದ ಕಲಿಯಲು ತೊಂದರೆ ಆಗಿದೆ. ಇದೀಗ ಭೌತಿಕ ತರಗತಿ ಆರಂಭವಾಗಿರುವುದರಿಂದ ಅನುಕೂಲ ಆಗುತ್ತಿದೆ. ಸ್ನೇಹಿತರ ಸಮಾಗಮದಿಂದ ಖುಷಿ ತಂದಿದೆ’ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ವಿಭಾಗದ ವಿದ್ಯಾರ್ಥಿನಿ ಶಿಲ್ಪಾ ತಿಳಿಸಿದರು.

‘ತರಗತಿಗಳಿಗೆ ಹಾಜರಾಗುವ ಹಾಗೂ ಆನ್‍ಲೈನ್ ಮೂಲಕ ಕಲಿಯುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡಲಾಗಿದೆ. ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂತೋಷದಿಂದ ಕಾಲೇಜಿಗೆ ಆಗಮಿಸಿ, ಪಾಠ ಕೇಳುತ್ತಿದ್ದಾರೆ. ಕೊರೊನಾ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಲಾಗಿದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.