ADVERTISEMENT

ನೀರಿನ ಬವಣೆ ನೀಗಿಸಿದ ಹೊಂಡ

ಕಾಮಗಾರಿಗೆ ₹ 21 ಲಕ್ಷ ವೆಚ್ಚ l 2.5 ಕೋಟಿ ಲೀಟರ್‌ ನೀರು ಸಂಗ್ರಹ

ಎಂ.ರಾಮಕೃಷ್ಣಪ್ಪ
Published 3 ಡಿಸೆಂಬರ್ 2020, 8:03 IST
Last Updated 3 ಡಿಸೆಂಬರ್ 2020, 8:03 IST
ಕೋನಪ್ಪಲ್ಲಿ ಬಳಿ ನಿರ್ಮಾಣವಾಗಿರುವ ನೀರು ಸಂಗ್ರಹಣೆಯ ಹೊಂಡ
ಕೋನಪ್ಪಲ್ಲಿ ಬಳಿ ನಿರ್ಮಾಣವಾಗಿರುವ ನೀರು ಸಂಗ್ರಹಣೆಯ ಹೊಂಡ   

ಚಿಂತಾಮಣಿ: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ಜನರು ಕುಡಿಯುವ ನೀರಿಗಾಗಿ ಹಾಹಾಕಾರ ಅನುಭವಿಸುತ್ತಿದ್ದಾರೆ. ಅಂತರ್ಜಲ ತೀವ್ರವಾಗಿ ಕುಸಿದಿದ್ದು, 1,500 ಅಡಿ ಕೊರೆದರೂ ಕೊಳವೆಬಾವಿಗಳಲ್ಲಿ ನೀರು ದೊರೆಯುತ್ತಿಲ್ಲ. ಹೀಗಾಗಿ ಸರ್ಕಾರ ಹಾಗೂ ಜನರಲ್ಲಿ ಮಳೆಯ ನೀರನ್ನು ಸದುಪಯೋಗ ಪಡಿಸಿಕೊಂಡು ಅಂತರ್ಜಲ ವೃದ್ಧಿಯತ್ತ ಮುಖ ಮಾಡಲಾಗುತ್ತಿದೆ.

ಹವಾಮಾನ ವೈಪರೀತ್ಯದಿಂದ ಮಳೆ ಪ್ರಮಾಣದಲ್ಲೂ ವ್ಯತ್ಯಾಸವಾಗಿದೆ. ಮಳೆ ಬಿದ್ದಾಗ ಹರಿದುಹೋಗುವ ನೀರನ್ನು ಪೋಲಾಗದಂತೆ ಸಂಗ್ರಹಿಸಿಕೊಳ್ಳುವತ್ತ ಗಮನಹರಿಸಲಾಗುತ್ತಿದೆ.

ಮುಂಗಾರಿನ ಮಳೆಯ ನೀರನ್ನು ವಿವಿಧ ರೀತಿಯಲ್ಲಿ ಸಂಗ್ರಹಣೆ ಮಾಡಿದರೆ ಅಂತರ್ಜಲ ವೃದ್ಧಿಯಾಗುತ್ತದೆ ಜತೆಗೆ ಪುನರ್‌ ಬಳಕೆ ಮಾಡಿಕೊಳ್ಳಬಹುದು ಎಂಬ ಚಿಂತನೆ ಮೊಳಕೆಯೊಡೆದಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡ, ಕಲ್ಯಾಣಿಗಳ ಪುನರುಜ್ಜೀವನ ನಡೆಯುತ್ತಿದೆ. ತಾಲ್ಲೂಕಿನ ಕೋನಪ್ಪಲ್ಲಿ ಗ್ರಾಮ ಪಂಚಾಯಿತಿಯು ಸುಮಾರು 2.5 ಎಕರೆ ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಿಸಿ ಸುಮಾರು 2.5 ಕೋಟಿ ಲೀಟರ್ ನೀರು ಸಂಗ್ರಹಣೆ ಮಾಡಿದೆ. ಇದರಿಂದ ಗ್ರಾಮದ ನೀರಿನ ಬವಣೆ ಪರಿಹಾರವಾಗಿದೆ.

ADVERTISEMENT

‘ಕೋನಪ್ಪಲ್ಲಿ ಗ್ರಾಮ ಪಂಚಾಯಿತಿಗೆ 3 ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಸಂದಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಕೊಳವೆಬಾವಿಗಳನ್ನು ಕೊರೆದಿದ್ದರೂ ನೀರಿನ ಸಮಸ್ಯೆ ಬಗೆಹರಿಯದೆ ದೊಡ್ಡ ಸಮಸ್ಯೆಯಾಗಿ ಕಾಡಿತ್ತು’ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಣ್ಣ.

ಬೆಟ್ಟಗಳ ತಪ್ಪಲಿನಲ್ಲಿರುವ ಗ್ರಾಮಕ್ಕೆ ಬೆಟ್ಟಗಳಿಂದ ಜರಿಯ ನೀರು ಹರಿದು ಬರುತ್ತಿತ್ತು. ಒಂದು ಸಣ್ಣ ಚೆಕ್ ಡ್ಯಾಂ ಇತ್ತು. ಇದು ಸರ್ಕಾರಿ ಭೂಮಿಯಾಗಿದ್ದರೂ ಒತ್ತುವರಿ ಯಾಗಿತ್ತು. ಇದೇ ಚೆಕ್ ಡ್ಯಾಂ ಅನ್ನು ವಿಶಾಲಗೊಳಿಸಿ ಎತ್ತರಿಸಿದರೆ ಸಾಕಷ್ಟು ನೀರು ಸಂಗ್ರಹಿಸಿಕೊಳ್ಳಬಹುದು ಎಂದು ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಅನುಮತಿ ಪಡೆಯಲಾಯಿತು. ಒತ್ತುವರಿದಾರರ ಮನವೊಲಿಸಿ 2.5 ಎಕರೆ ಪ್ರದೇಶದಲ್ಲಿ ₹ 21 ಲಕ್ಷ ವೆಚ್ಚದಲ್ಲಿ ನೀರು ಸಂಗ್ರಹಣೆಯ ಹೊಂಡವನ್ನು ನಿರ್ಮಾಣ ಮಾಡಲಾಗಿದೆ.

ಹಿಂದೆ ಇದ್ದ ಚೆಕ್ ಡ್ಯಾಂ ಕೋಡಿಯನ್ನು ಎತ್ತರಿಸಲಾಗಿದೆ. ಸುತ್ತಲೂ ಕಲ್ಲುಗಳ ಕಟ್ಟೆ ಕಟ್ಟಿ ಹೂಳು ತೆಗೆಯಲಾಗಿದೆ. 12 ಅಡಿ ನೀರು ಸಂಗ್ರಹವಾಗಿದೆ. ಮದ್ಯದಲ್ಲಿದ್ದ ಒಂದು ಜಂಬುನೇರಳೆ ಮರವನ್ನು ಕಡಿಯದೆ ಉಳಿಸಿಕೊಳ್ಳಲಾಗಿದೆ. ಅದಕ್ಕೆ ದ್ವೀಪದಂತೆ ಸುತ್ತಲೂ ಕಲ್ಲುಕಟ್ಟೆ ಕಟ್ಟಲಾಗಿದೆ. ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಮರುಪೂರಣವಾಗಿದೆ. ಸ್ಥಗಿತಗೊಂಡಿದ್ದ ಬಾವಿಗಳಲ್ಲಿ ನೀರು ಬರುತ್ತಿದೆ. ಗ್ರಾಮದ ಜನರು ಮತ್ತು ಜಾನುವಾರುಗಳ ನೀರಿನ ಸಮಸ್ಯೆ ನಿವಾರಣೆಯಾಗಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್. ಅತೀಕ್ ನೀರು ಸಂಗ್ರಹಣೆಯ ಹೊಂಡ ವೀಕ್ಷಿಸುವ ಸಲುವಾಗಿಯೇ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತರೆ ಗ್ರಾಮ ಪಂಚಾಯಿತಿಗಳಲ್ಲೂ ಇದೇ ಮಾದರಿಯ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ.

ಹೊಂಡದ ಬಳಿ ಎರಡು ಕೊಳವೆಬಾವಿಗಳು ನೀರು ಇಲ್ಲದೆ ಸ್ಥಗಿತಗೊಂಡಿದ್ದವು. ನೀರು ಸಂಗ್ರಹಣೆ ನಂತರ ಅಂತರ್ಜಲ ಮರುಪೂರಣಗೊಂಡಿದ್ದು, ದಿನದ 24 ಗಂಟೆಯೂ ನೀರು ದೊರೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.