ADVERTISEMENT

ಮನ್‌ ಕಿ ಬಾತ್‌ನಲ್ಲಿ ಹೇಳಿದ್ದೆಲ್ಲ ಕಾನೂನಾದರೆ ಅದು ಮಂಕಿ ಬಾತ್ ಆಗ್ತದೆ– ಮೊಯಿಲಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 13:34 IST
Last Updated 14 ಜನವರಿ 2019, 13:34 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ   

ಚಿಕ್ಕಬಳ್ಳಾಪುರ: ‘ಶಾಸ್ತ್ರೀಯವಾದ ಸಂಶೋಧನೆ, ಅಧ್ಯಯನ ನಡೆಸಿ ಅದರ ವರದಿ ಆಧಾರದಲ್ಲಿ ಮೇಲ್ಜಾತಿಗೆಮೀಸಲಾತಿ ನೀಡಬೇಕೇ ಹೊರತು, ಸರಿಯಾಗಿ ಸಂವಿಧಾನ ಓದಿ ಅರ್ಥೈಸಿಕೊಳ್ಳದಂತಹ ಪ್ರಧಾನಿ ಮನಕಿ ಬಾತ್‌ನಲ್ಲಿ ಹೇಳಿದ ತಕ್ಷಣವೇ ಅದರ ಆಧಾರದಲ್ಲಿ ರಾಜಕೀಯ ಉದ್ದೇಶಕ್ಕೆ ಅಂತಹ ಕಾನೂನು ತರುವುದು ಸರಿಯಲ್ಲ’ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವುದೇ ಒಂದು ಕಾನೂನು ಸಿದ್ಧಪಡಿಸಬೇಕಾದರೆ ಅದಕ್ಕೆ ಸಾಕಷ್ಟು ದತ್ತಾಂಶಗಳು, ಮಾಹಿತಿ, ಅಂಕಿಸಂಖ್ಯೆಗಳು ಬೇಕು. ಅಧ್ಯಯನಗಳು, ಸಾಮಾಜಿಕ ಮತ್ತು ಸಾಂವಿಧಾನಿಕ ಅಂಶಗಳು ಇಲ್ಲದೆ ಮನಕಿ ಬಾತತ್‌ನಲ್ಲಿ ಹೇಳಿದ್ದಾರೆ ಎಂಬಕಾರಣಕ್ಕೆ ಕಾನೂನು ಮಾಡಿದರೆ ಅದು ಕಡೆಗೆ ಮಂಕಿ ಬಾತ್ ಆಗುತ್ತದೆ’ ಎಂದು ವ್ಯಂಗ್ಯವಾಡಿದರು.

‘ಪ್ರಧಾನಿಯವರು ಮುಖ್ಯಮಂತ್ರಿ ಕುರಿತು ಆ ರೀತಿ ಹೇಳಿಕೆ ನೀಡಿದ್ದು ಕುಮಾರಸ್ವಾಮಿ ಅವರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ, ಒಕ್ಕೂಟ ವ್ಯವಸ್ಥೆಗೆ ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನ. ಪ್ರಧಾನಿ ಅವರು ಸಂವಿಧಾನವನ್ನು ಪುನಃ ಓದಬೇಕು. ಆ ಮೇಲೆ ಇಂತಹ ವಿಚಾರ ಮಾತನಾಡಬೇಕು’ ಎಂದು ತಿಳಿಸಿದರು.

‘ಬಿಜೆಪಿಯವರು ಮೀನು ಹಿಡಿಯಲು ವಿವಿಧೆಡೆ ಕಡೆಗಳಲ್ಲಿ ಒಂದೊಂದು ಗಾಳ ಹಾಕುತ್ತಿದ್ದಾರೆ. ಆದರೆ ಆ ಗಾಳಕ್ಕೆ ಮೀನು ಸಿಗದಿರುವುದು ದುರದೃಷ್ಟ. ಈಗ ಅವರೇ ಆಪರೇಷನ್ ಮಾಡಿಕೊಳ್ಳಬೇಕು. ಏಕೆಂದರೆ ಅವರು ಮಾನಸಿಕವಾಗಿ ಸರಿಯಿಲ್ಲ. ಅವರು ತಜ್ಞ ವೈದ್ಯರನ್ನು ಸಂಪರ್ಕಿಸುವ ಅವಶ್ಯಕತೆ ಇದೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಇದನ್ನು ಅಲ್ಲಾಡಿಸಲು ಪ್ರಯತ್ನಿಸಿದರೆ ಆ ಮರ ಬಿದ್ದು ಅವರಿಗೇ ಆಘಾತವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.