ಬಾಗೇಪಲ್ಲಿ: ‘ಪ್ರಜೆಗಳು ಮತದಾನದ ಸಂದರ್ಭದಲ್ಲಿ ಆಸೆ, ಆಮಿಷಕ್ಕೆ ಒಳಗಾಗದೆ ನಿರ್ಭಯವಾಗಿ ಮತ ಚಲಾಯಿಸಬೇಕು’ ಎಂದು ಸಿವಿಲ್ ನ್ಯಾಯಾಧೀಶ ಎಸ್.ಎಂ. ಅರುಟಗಿ ತಿಳಿಸಿದರು.
ಪಟ್ಟಣದ ಸಿವಿಲ್ ನ್ಯಾಯಾಲಯದ ಮುಂಭಾಗ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಂವಿಧಾನದಡಿ ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ. ಮತ ಚಲಾಯಿಸಿ ಜನಪರ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಸರ್ಕಾರದ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಬೇಕು. ಚುನಾವಣೆಗಳಿಗೆ ಖರ್ಚಾಗುವ ಕೋಟ್ಯಂತರ ರೂಪಾಯಿಯನ್ನು ಜನರ ಮೇಲೆ ತೆರಿಗೆ ರೂಪದಲ್ಲಿ ವಿಧಿಸುತ್ತಾರೆ. 5 ವರ್ಷಗಳ ಕಾಲ ಜನಪರ ಕೆಲಸ ಮಾಡುವ ಸರ್ಕಾರಗಳ ಯೋಜನೆಗಳನ್ನು ತಲುಪಿಸುವ ನಾಯಕರಿಗೆ ಮತ ನೀಡಬೇಕು ಎಂದು ತಿಳಿಸಿದರು.
ಹಿರಿಯ ವಕೀಲ ನರಸಿಂಹಾರೆಡ್ಡಿ ಮಾತನಾಡಿ, ಚುನಾವಣೆಗಳಲ್ಲಿ ನಾಯಕರಿಂದ ಹಣ ಪಡೆದು ಮತದಾನ ಮಾಡುವಂತಹ ದುರ್ಗತಿ ಬಂದಿರುವುದು ಶೋಚನೀಯ. ಇಂತಹ ನಾಯಕರು ಜನಪರ ಕೆಲಸ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಸಿ.ಎನ್. ಚಿನ್ನಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಮುಸ್ತಾಕ್ ಅಹಮದ್, ಕಾರ್ಯದರ್ಶಿ ವಿ. ವೆಂಕಟೇಶ್, ವಕೀಲರಾದ ಕರುಣಾಸಾಗರ ರೆಡ್ಡಿ, ಎ.ಜಿ. ಸುಧಾಕರ್, ಎ. ನಂಜುಂಡಪ್ಪ, ಫಯಾಜ್ ಅಹಮದ್, ಚಂದ್ರಶೇಖರ್, ನಾಗಭೂಷಣ ನಾಯಕ್, ಬಾಲುನಾಯಕ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.