ಬಾಗೇಪಲ್ಲಿ: ಬೇಸಿಗೆಯ ಬಿಸಿಲು ಸುಡುತ್ತಿದ್ದು, ಕೆರೆ, ಕುಂಟೆಗಳಲ್ಲಿ ನೀರು ಬತ್ತಿದ್ದು ಜಾನುವಾರುಗಳು ನೀರು ಹಾಗೂ ಮೇವಿಗಾಗಿ ಬಸವಳಿಯುತ್ತಿವೆ.
ತಾಲ್ಲೂಕಿನ ಪಶುವೈದ್ಯ ಇಲಾಖೆ ಮೇ 5ರಂದು ನೀಡಿರುವ ಅಂಕಿ ಅಂಶಗಳಂತೆ ತಾಲ್ಲೂಕಿನಲ್ಲಿ 30,479 ಜಾನುವಾರುಗಳಿವೆ. ಆದರೆ, ಅವುಗಳಿಗೆ ಸರಿಯಾಗಿ ಮೇವು ಹಾಗೂ ನೀರು ಇಲ್ಲದಂತಾಗಿದೆ.
ತಾಲ್ಲೂಕಿನಲ್ಲಿ ಬಹುತೇಕ ಬೆಟ್ಟ-ಗುಡ್ಡಗಳಿದ್ದು, ಅನೇಕ ಮಂದಿ ಕುರಿ, ಮೇಕೆ, ಹಸುಗಳನ್ನು ಮೇಯಿಸುತ್ತಿದ್ದಾರೆ. ಆದರೆ ಅವುಗಳಿಗೆ ಹುಲ್ಲು ಇಲ್ಲದೆ ಒಣ ಕಡ್ಡಿಗಳನ್ನು ಮೇಯುವಂತಾಗಿದೆ. ಎಲ್ಲೆಡೆ ಕೆರೆ, ಕುಂಟೆ, ಕೃಷಿ ಹೊಂಡಗಳಲ್ಲಿ ನೀರು ಬತ್ತಿದ್ದು, ಜಾನುವಾರುಗಳು, ಪ್ರಾಣಿ, ಪಕ್ಷಿಗಳಿಗೆ ಮೇವು, ನೀರಿಗಾಗಿ ಹಾಹಾಕಾರ ಉಂಟಾಗಿದೆ.
ತಾಲ್ಲೂಕಿನ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಲ್ಲಿ ಜಾನುವಾರುಗಳಿಗಾಗಿ ನೀರಿನ ತೊಟ್ಟಿ ನಿರ್ಮಿಸಿಲ್ಲ. ಜೊತೆಗೆ ನಿರ್ಮಿಸಿರುವ ತೊಟ್ಟಿಗಳು ಸೂಕ್ತ ನಿರ್ವಹಣೆ ಇಲ್ಲದೆ ಕಸ, ತ್ಯಾಜ್ಯಗಳಿಂದ ಕೂಡಿದೆ. ಇದರಿಂದ ಪ್ರಾಣಿ, ಪಕ್ಷಿಗಳು ನೀರು ಸಿಗದೆ ಪರಿತಪಿಸುತ್ತಿವೆ.
ಗ್ರಾಮಗಳ ಕೆರೆ, ಕುಂಟೆ, ಕಾಲುವೆ, ತೊಟ್ಟಿಗಳಲ್ಲಿ ನೀರು ಸಂಗ್ರಹಿಸಬೇಕು. ಪ್ರಾಣಿ ಪಕ್ಷಿಗಳಿಗೆ ಮನೆ, ಕಾಡು, ರಸ್ತೆಗಳ ಪಕ್ಕದಲ್ಲಿ ನೀರು ಇಡಬೇಕು. ತಿಪ್ಪೆಗುಂಡಿಗೆ ಬೀಸಾಡುವ ಅನ್ನ, ತರಕಾರಿ, ಕಾಳುಗಳನ್ನು ಮನೆ ಮುಂದೆ ಹಾಕಿ ಕೆಲವು ಪ್ರಾಣಿಗಳು ಇದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ ಎಂಬುದು ದಲಿತ ಸಂಘರ್ಷ ಸಮಿತಿ ಮುಖಂಡ ಗಂಗುಲಪ್ಪ ಅವರ ಮಾತಾಗಿದೆ.
ಹೋಬಳಿವಾರು ಮೇವಿನ ಕೇಂದ್ರಗಳನ್ನು ತೆರೆದು ಜಾನುವಾರುಗಳಿ ಹಸಿ ಮೇವು ವಿತರಿಸಿ ಎಂಬುದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ನ ತಾಲ್ಲೂಕು ಮುಖಂಡ ದೇವಿಕುಂಟೆ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.