ADVERTISEMENT

ಎತ್ತಿನಹೊಳೆ; ನೀರಿನ ಲಭ್ಯತೆ, ಇಳುವರಿ ಬಗ್ಗೆ ಚರ್ಚಿಸಿ

ಜು.2ರಂದು ಸಚಿವ ಸಂ‍ಪುಟ ಸಭೆ; ಶಾಶ್ವತ ನೀರಾವರಿ ಹೋರಾಟ ಸಮಿತಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:31 IST
Last Updated 28 ಜೂನ್ 2025, 16:31 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿದರು   

ಪ್ರಜಾವಾಣಿ ವಾರ್ತೆ

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಯ ಕಟ್ಟಕಡೆಯ ಫಲಾನುಭವಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸುವುದು ಅಸಾಧ್ಯವಾಗಿದೆ. ನೀರಿನ ಲಭ್ಯತೆ, ಇಳುವರಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದೆ. 

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, ಬಯಲು ಸೀಮ ಜಿಲ್ಲೆಗಳ ನೀರಿನ ಬಿಕ್ಕಟ್ಟು ತೀವ್ರವಾಗಿದೆ. ಸರ್ಕಾರಗಳು, ರಾಜಕೀಯ ನಾಯಕರು, ಚುನಾಯಿತ ಪ್ರತಿನಿಧಿಗಳು ನೀರಾವರಿ ಕಲ್ಪಿಸುವ ವಿಚಾರಗಳನ್ನು ಪರಿಗಣಿಸುತ್ತಿಲ್ಲ ಎಂದು ದೂರಿದರು.

ADVERTISEMENT

ಜೂ.19ರಂದು ನಂದಿಗಿರಿಧಾಮದಲ್ಲಿ ಸಚಿವ ಸಂ‍ಪುಟ ಸಭೆ ನಿಗದಿಯಾಗಿತ್ತು. ಆದರೆ ಆ ಸಭೆಯು ಜು.2ಕ್ಕೆ ಮುಂದೂಡಲಾಯಿತು. ನಂತರ ಮುಖ್ಯಮಂತ್ರಿ ಎತ್ತಿನಹೊಳೆ ಕಾಮಗಾರಿ ಪ್ರಗತಿ ಪರಿಶೀಲಿಸಿದರು. ಉಪಮುಖ್ಯಮಂತ್ರಿ ಕೊರಟಗೆರೆ ಮತ್ತು ದೊಡ್ಡಬಳ್ಳಾಪುರದಲ್ಲಿ ಯೋಜನೆಯ ಪರಿಶೀಲಿಸಿದರು ಎಂದರು.

ಈ ಹಿಂದಿನಿಂದಲೂ ಪರಿಶೀಲನೆಗಳು ನಡೆಯುತ್ತಿವೆ. ಕಾಮಗಾರಿ ಪರಿಶೀಲನೆ, ಎಷ್ಟು ಖರ್ಚಾಗಿದೆ ಎನ್ನುವ ಲೆಕ್ಕಾಚಾರ ನಮಗೆ ಬೇಡ. ಎರಡು ವರ್ಷದಲ್ಲಿ ನೀರು ಕೊಡುತ್ತೇವೆ ಎಂದು ಹೇಳಿದ್ದ ಸರ್ಕಾರಗಳು ಏಕೆ ಇಷ್ಟು ವರ್ಷವಾದರೂ ನೀರು ಕೊಟ್ಟಿಲ್ಲ ಎನ್ನುವುದನ್ನು ತಿಳಿಸಬೇಕು ಎಂದರು.

12 ವರ್ಷ ಕಾಮಗಾರಿ ಕೈಗೊಂಡು ಸಾವಿರಾರು ಕೋಟಿ ಖರ್ಚು ಮಾಡಲಾಗಿದೆ. 2024ರ ವಿಧಾನಸಭೆ ಅಧಿವೇಶನದಲ್ಲಿ ಎತ್ತಿನಹೊಳೆ ಯೋಜನೆಯ ನೀರಿನ ಲಭ್ಯತೆ 8 ಟಿಎಂಸಿ ಅಡಿಗೆ ಇಳಿದಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಬೇಕು ಎಂದರು.

ಕೆ.ಸಿ ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿ ನೀರಾವರಿ ಯೋಜನೆಯಲ್ಲಿ ಮೂರು ಹಂತದ ಶುದ್ಧೀಕರಣ ಬೇಡ ಎನ್ನುತ್ತಿದ್ದವರು ಈಗ ಮೂರು ಹಂತದ ಶುದ್ಧೀಕರಣ ಬೇಕು ಎನ್ನುತ್ತಿದ್ದಾರೆ. ನಾವು ಬಯಲು ಸೀಮೆ ನೀರಾವರಿ ವಿಚಾರಗಳನ್ನು ಭಾವನಾತ್ಮಕವಾಗಿ ಹೇಳುತ್ತಿಲ್ಲ. ವೈಜ್ಞಾನಿಕ ಮಾಹಿತಿ, ಅಧ್ಯಯನ ವರದಿಗಳನ್ನು ಆಧರಿಸಿ ಮಾತನಾಡುತ್ತಿದ್ದೇವೆ ಎಂದರು.

ಕೆರೆಗಳಿಗೆ ನೀರು ಹರಿಯುವ ರಾಜಕಾಲುವೆಗಳನ್ನು ಪುನಶ್ಚೇತನಗೊಳಿಸಬೇಕು. ಈ ಜಿಲ್ಲೆಗಳ ಬಗ್ಗೆ ಕಾಳಜಿ ಇದ್ದರೆ ಕೃಷ್ಣಾ ನದಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಮಳ್ಳೂರು ಹರೀಶ್ ಮಾತನಾಡಿ,  ಮೂರು ಹಂತದ ಶುದ್ಧೀಕರಣ ಬೇಡ ಎಂದು ಉಸ್ತುವಾರಿ ಸಚಿವರು ಹೇಳುತ್ತಾರೆ. ಆದರೆ ನಾಗರಿಕರಿಗೆ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿಗಳು ಈ ಅರೆ ಸಂಸ್ಕರಿತ ಕೊಳಚೆ ನೀರು ಹರಿಸುತ್ತಿರುವ ಕರೆಗಳಲ್ಲಿಯೇ ಇವೆ. ಈ ನೀರು ಅಂತರ್ಜಲ ಸೇರಿ ಜನರ ಆರೋಗ್ಯದ ಹದಗೆಡುತ್ತಿದೆ ಎಂದು ದೂರಿದರು.

ಸುಷ್ಮಾ ಶ್ರೀನಿವಾಸ್, ಲಕ್ಷ್ಮಯ್ಯ, ರವಿಕುಮಾರ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.