ಮೂಡಿಗೆರೆ: ಅಡಿಕೆ ಬೆಳೆ ನಿಷೇಧಿಸುವಂತೆ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲೀ ಯಾವುದೇ ಪ್ರಮಾಣ ಪತ್ರಗಳನ್ನು ನೀಡಿಲ್ಲ. ಅಡಿಕೆ ಬೆಳೆ ನಿಷೇಧಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಇದರ ಬಗ್ಗೆ ರೈತರಿಗೆ ಆತಂಕ ಬೇಡ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಪಟ್ಟಣದಲ್ಲಿ ಲ್ಯಾಂಪ್ಸ್ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡಿಕೆ ಬೆಳೆ ವಿಚಾರವಾಗಿ ಸುಪ್ರೀಂ ಕೋರ್ಟ್, 7 ಜನರ ಸಮಿತಿಯನ್ನು ನೇಮಕಗೊಳಿಸಿ, ಆ ಸಮಿತಿಯ ವರದಿ ಅನ್ವಯ ಚರ್ಚೆಗಳು ನಡೆಯುತ್ತಿದ್ದು, ಈ ಚರ್ಚೆಗೆ ಕಳೆದ ಅವಧಿಯ ರಾಜ್ಯ ಸರ್ಕಾರ ನೀಡಿರುವ ಮಾಹಿತಿ ವ್ಯತ್ಯಾಸ ಕಾರಣವಾಗಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜೊತೆಯಲ್ಲಿ ಎರೆಡೆರಡು ಬಾರಿ ಸಭೆ ನಡೆಸಲಾಗಿದ್ದು, ಧನಾತ್ಮಕ ನಿರ್ಧಾರಕ್ಕೆ ಪೂರಕವಾದ ಕಾರ್ಯವೆಸಗಲಾಗುವುದು, ಆದುದರಿಂದ ಅಡಿಕೆ ಬೆಳೆ ವಿಚಾರವಾಗಿ ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಸೃಷ್ಠಿಸಬಾರದು ಎಂದರು.
ಯಾವುದೇ ಕಾನೂನನ್ನು ರಾಜ್ಯ ಸರ್ಕಾರದ ಅನುಮತಿಯಿಲ್ಲದೇ ಕೇಂದ್ರ ಸರ್ಕಾರ ಏಕಾಏಕಿ ರಚನೆ ಮಾಡಿ ಜಾರಿಗೆ ತರಲು ಸಾಧ್ಯವಿಲ್ಲದ್ದರಿಂದ ಜಿಲ್ಲೆಯಲ್ಲಿ ಆತಂಕ ಸೃಷ್ಠಿಸಿರುವ ಒತ್ತುವರಿ ಸಮಸ್ಯೆ, ಹುಲಿ ಯೋಜನೆ ಮತ್ತು ಕಸ್ತೂರಿ ರಂಗನ್ ವರದಿ ಯೋಜನೆಗಳೆಲ್ಲದಕ್ಕೂ ಹಿಂದಿನ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ ಮತ್ತು ಪ್ರಮಾಣಪತ್ರ ಸಲ್ಲಿಸಿರುವ ಬಗ್ಗೆ ದಾಖಲೆಗಳಿವೆ ಎಂದು ಆರೋಪಿಸಿದರು.
ಇಂತಹ ಯೋಜನೆಗಳ ಬಗ್ಗೆ ಆರೋಪ ಪ್ರತ್ಯಾರೋಪಗಳಲ್ಲಿಯೇ ಕಾಲಹರಣ ಮಾಡುವ ಬದಲು, ಎಲ್ಲಾ ಜನಪ್ರತಿನಿಧಿಗಳು ಪಕ್ಷಭೇಧ ಮರೆತು ಹೋರಾಟ ನಡೆಸಬೇಕು ಎಂದರು. ಮಲೆನಾಡಿನಲ್ಲಿ ನಿಷೇಧಿಸಲಾಗಿದ್ದ ಟಿಂಬರ್ ವ್ಯಾಪಾರಕ್ಕೆ ಹೊಸ ನೀತಿಯನ್ನು ಜಾರಿಗೆ ತರಲಾಗಿದ್ದು, ಮರ ಕಡಿತಲೆಗೆ ಹೊಸ ಆದೇಶ ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.