ADVERTISEMENT

ಅರ್ಹ ಫಲಾನುಭವಿಗಳಿಗೆ ಮನೆ: ಜೀವರಾಜ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 8:20 IST
Last Updated 21 ಆಗಸ್ಟ್ 2012, 8:20 IST

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮನೆ ಹಾಗೂ ನಿವೇಶನ ರಹಿತ ನೈಜ ಫಲಾನು ಭವಿಗಳನ್ನು ಗುರುತಿಸಿ ಆದ್ಯತೆ ಮೇಲೆ ಆಯ್ಕೆ ಮಾಡಿ ನೀಡುವಂತೆ ಅಧಿಕಾರಿ ಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಅರಣ್ಯ ಭೂಮಿ ಹೊರತಾಗಿ ಗೋಮಾಳ, ಕಂದಾಯ ಭೂಮಿಯಲ್ಲಿ ಲಭ್ಯವಿರುವ ಜಾಗವನ್ನು ಉಪಯೋ ಗಿಸಿ, ಮನೆ ಹಾಗೂ ನಿವೇಶನ ರಹಿತ ಅರ್ಹ ಫಲಾನುಭವಿಗಳನ್ನು ಗುರುತಿಸಿ ತಾರತಮ್ಯ ಮಾಡದೆ, ನಿಷ್ಪಕ್ಷಪಾತವಾಗಿ ಮನೆ ಮತ್ತು ನಿವೇಶನ ನೀಡಬೇಕೆಂದು ಸೂಚಿಸಿದರು.

ಜಿಲ್ಲೆಯ ಬಯಲುಸೀಮೆ ಪ್ರದೇಶಕ್ಕಿಂತ ಹೆಚ್ಚಾಗಿ ಮಲೆನಾಡಿನ ಪ್ರದೇಶಗಳಲ್ಲಿ ನಿವೇಶನ ನೀಡಲು ಸಮಸ್ಯೆ ಇದ್ದು, ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
ಅರಣ್ಯ ಇಲಾಖೆ ಅಧಿಕಾರಿಗಳು ಕಂದಾಯ ಜಮೀನುಗಳನ್ನು ಅತೀ ಶೀಘ್ರ ತೆರವುಗೊಳಿಸಿ, ನಿವೇಶನ ನೀಡಲು ಅನುವು ಮಾಡಿಕೊಡಬೇಕೆಂದು ಸಚಿ ವರು ಆದೇಶ ನೀಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶ ದಲ್ಲಿ ನಿವೇಶನ ರಹಿತರ ಪಟ್ಟಿಯನ್ನು ಗ್ರಾಮಲೆಕ್ಕಿಗರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಯಾರಿಸ ಬೇಕು. ಹಂತ ಹಂತವಾಗಿ ಕಾನೂನು ಚೌಕಟ್ಟಿನ ಅಡಿಯಲ್ಲಿ ನಿವೇಶನಗಳನ್ನು ಅರ್ಜಿದಾರರಿಗೆ ತ್ವರಿತಗತಿಯಲ್ಲಿ ನೀಡಬೇಕು ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಮೂಡಿಗೆರೆ ತಾಲ್ಲೂಕಿ ನಾದ್ಯಂತ ನಿವೇಶನಕ್ಕಾಗಿ 3105 ಅರ್ಜಿ ಗಳು ಬಂದಿವೆ. ಈಗಾಗಲೇ ನಿವೇ ಶನಕ್ಕಾಗಿ 79 ಎಕರೆ ಪ್ರದೇಶ ಕಾಯ್ದಿ ರಿಸಲಾಗಿದ್ದು, ಕಳಸಾ ಹೋಬಳಿಯಲ್ಲಿ 40.30 ಎಕರೆ, ಗೋಣಿಬೀಡಿನಲ್ಲಿ 21 ಎಕರೆ, ಬಣಕಲ್‌ನಲ್ಲಿ 15.10 ಎಕರೆ ಗುರುತಿಸಲಾಗಿದೆ ಎಂದರು.

ನಿವೇಶನ ಗುರುತಿಸುವ ಸಂಬಂಧ 29 ಗ್ರಾ.ಪಂ. ಪೈಕಿ 23 ಪಂಚಾಯಿತಿಗಳಲ್ಲಿ ಜಾಗ ಗುರುತಿಸಲಾಗಿದೆ. ಉಳಿದಿರುವ ಪಂಚಾಯಿತಿಗಳಲ್ಲಿ ಶೀಘ್ರವೇ ನೀಡಲಾಗುವುದು. ಜಾಗದ ಕೊರತೆ ಕಂಡುಬಂದ ಪ್ರದೇಶದಲ್ಲಿ ಜಿಲ್ಲಾ ಸಮಿತಿ ವತಿಯಿಂದ ನಿವೇಶನ ಖರೀದಿಸಿ, ಹಂಚಿಕೆ ಮಾಡುವುದು ಸೂಕ್ತ ಎಂದರು.

ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಪಿ.ಹೊನ ಕೇರಿ, ಉಪವಿಭಾಗಾಧಿಕಾರಿ ಡಾ. ಪ್ರಶಾಂತ್, ಮೂಡಿಗೆರೆ ತಾಲ್ಲೂಕಿನ ನಿವೇಶನಕ್ಕಾಗಿ ಹೋರಾಟ ನಡೆಸಿದ ಸಂಘ ಸಂಸ್ಥೆಯ ಮುಖಂಡರು ಇದ್ದರು.
 

`ನಕ್ಸಲ್ ಸಮಸ್ಯೆ- ಕಟ್ಟುನಿಟ್ಟಿನ ಕ್ರಮ~
ಚಿಕ್ಕಮಗಳೂರು:
  ಗೃಹ ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ನಕ್ಸಲ್ ಚಟುವಟಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ ಕೈಗೊಳ್ಳ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್  ತಿಳಿಸಿದರು.

ಸೋಮವಾರ ನಗರಕ್ಕೆ ಆಗಮಿಸಿದ್ದ ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಕ್ಸಲ್ ಚಟುವಟಿಕೆ ಕುರಿತು ಗಮನ ಸೆಳೆದಾಗ, ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿ ಮತ್ತು ಅಲ್ಲಿ ವಾಸವಿರುವ ಜನರಿಗೆ ಮೂಲಸೌಕರ್ಯ ಒದಗಿಸಲು ಸರ್ಕಾರ ಹಣ ಬಿಡುಗಡೆಗೊಳಿಸಿದೆ ಎಂದರು.

ಇದೇ 18ರಂದು ನಕ್ಸಲೀಯ ಬೀಡು ಬಿಟ್ಟಿದ್ದ ಬಿಡಾರ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಟ್ಟವಾದ ಕಾಡಿನೊಳಗೆ ನಕ್ಸಲರು ಇರುವ ಮಾಹಿತಿ ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಬೆನ್ನು ತಟ್ಟಲೇಬೇಕು. ನಕ್ಸಲರ ಪತ್ತೆಗೆ ದುರ್ಗಮ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT