ADVERTISEMENT

ಆರೋಗ್ಯ ಕಾಳಜಿ ಅಗತ್ಯ: ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 11:07 IST
Last Updated 19 ಜುಲೈ 2013, 11:07 IST

ಕಡೂರು: ಮನುಷ್ಯನ ಆರೋಗ್ಯದಲ್ಲಿ ಶುದ್ಧ ಕುಡಿಯುವ ನೀರು ಪ್ರಮುಖ ಪಾತ್ರ ವಹಿಸುತ್ತಿದ್ದು ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಕಡೂರು ಪಟ್ಟಣದ ಹಳೇ ಎಪಿಎಂಸಿ ಆವರಣದಲ್ಲಿ ಪುರಸಭೆ ಮತ್ತು ಎಪಿಎಂಸಿ ಸಹಯೋಗದೊಂದಿಗೆ ನಿರ್ಮಿಸಿದ ನೂತನ ಶುದ್ಧಗಂಗಾ ಘಟಕವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

`ದೇಶದ 213 ಜಿಲ್ಲೆಗಳ ಸುಮಾರು 23ಕೋಟಿ ಜನರು ಫ್ಲೋರೈಡ್‌ಯುಕ್ತ ನೀರು ಬಳಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಶುದ್ಧ ನೀರಿನಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳೂ ಜನರನ್ನು ಬಲಿ ತೆಗೆದುಕೊಳ್ಳುತ್ತಿವೆ. ನಾವು ಬಳಸುವ ನೀರಿನ ಮೂಲಗಳನ್ನೂ ನಾವು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು ಇದಕ್ಕೆ ಕಾರಣವಾಗಿದೆ.

ಈ ಹಿಂದೆ ನಾವು ಹಳ್ಳಿಗಳಿಗೆ ಭೇಟಿ ಇತ್ತರೆ ಸ್ವಸಹಾಯ ಸಂಘಗಳಿಗೆ ಸಹಾಯಹಸ್ತ ನೀಡುವಂತೆ, ದೇವಾಲಯ, ಸಮುದಾಯ ಭವನಗಳ ನಿರ್ಮಾಣಕ್ಕೆ ಸಹಾಯ ಒದಗಿಸುವಂತೆ ಬೇಡಿಕೆ ಬರುತ್ತಿತ್ತು. ಆದರೆ, ಇಂದು ಹಳ್ಳಿಗಳಲ್ಲಿ ಜಾಗೃತಿ ಉಂಟಾಗಿರುವ ದ್ಯೋತಕವಾಗಿ ಶುದ್ಧಗಂಗಾ ಘಟಕ ಸ್ಥಾಪಿಸುವಂತೆ ಬೇಡಿಕೆ ಬರುತ್ತಿದೆ' ಎಂದು ಹರ್ಷ ವ್ಯಕ್ತಪಡಿಸಿದರು.

ಶುದ್ಧಗಂಗಾ ಘಟಕ ಸ್ಥಾಪಿಸುವುದು ಕಷ್ಟವೇನಲ್ಲ, ಆದರೆ ನಿರ್ವಹಣೆ ಬಹಳ ಮುಖ್ಯ. ಸರ್ಕಾರ, ಶಾಸಕರು, ಸಂಸದರು ತಮ್ಮ ಅನುದಾನವನ್ನು ಯೋಜನೆಯ ಅನುಷ್ಠಾನಕ್ಕೂ ಬಳಸಿದರೆ ಹೆಚ್ಚು ಹೆಚ್ಚು ಘಟಕ ಸ್ಥಾಪಿಸಲು ಅನುಕೂಲವಾಗಲಿದೆ.

`ಪ್ರಜಾವಾಣಿ'ಯಲ್ಲಿ ಗುರುವಾರ ಸರ್ಕಾರಿ ಪ್ರಾಯೋಜಿತ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿಯೂ ಅವ್ಯವಹಾರ ನಡೆದಿದೆ ಎಂಬ ಸುದ್ದಿ ನಿಜಕ್ಕೂ ದುಃಖಕಾರಿ ಎಂದು ನುಡಿದ ಅವರು, ಹಳ್ಳಿಗಳು ಇಂದು ನಿಜಕ್ಕೂ ಪರಿವರ್ತನೆಯ ಕಡೆ ಸಾಗಿವೆ. ಮಹಿಳೆಯರು ಕುಟುಂಬದ ಆರ್ಥಿಕ ಶಿಸ್ತನ್ನು ನಡೆಸುವುದು ಮತ್ತು ಪುರುಷನಂತೆ ದುಡಿಯುವುದು ಕುಟುಂಬದಲ್ಲಿ ಬಲ ಮತ್ತು ಒಗ್ಗಟ್ಟನ್ನು ತರುತ್ತದೆ ಎಂದು ಆಶಿಸಿದರು.

ಜಿ.ಪಂ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಡೂರು ಪಟ್ಟಣಕ್ಕೆ ಇನ್ನೂ ಒಂದೆರಡು ಘಟಕ ಅಗತ್ಯವಿದೆ ಎಂದು ಕೋರಿಕೆ ಸಲ್ಲಿಸಿದರೆ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಎಲ್.ಎಚ್.ಮಂಜುನಾಥ್ ಈ ಬಾರಿ ಒಟ್ಟು 50ಘಟಕಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಡೂರು ಪುರಸಭೆ ಮುಖ್ಯಾಧಿಕಾರಿ ಕುಮಾರನಾಯ್ಕ, ಸದಸ್ಯರಾದ ಬಷೀರ್‌ಸಾಬ್,  ಲೋಕೇಶ್, ರೇಣುಕಾರಾಧ್ಯ ಇದ್ದರು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.