ನರಸಿಂಹರಾಜಪುರ: ತಾಲ್ಲೂಕು ಕೇಂದ್ರದ ವ್ಯಾಪ್ತಿಯಲ್ಲಿ ಗೋದಾಮಿನ ಕೊರತೆಯಿಂದಾಗಿ ಭತ್ತ ಖರೀದಿ ಪ್ರಾರಂಭವಾಗದೆ ಎನ್.ಆರ್.ಪುರ ದಿಂದ 45 ಕಿಲೋಮೀಟರ್ ದೂರದ ಲಕ್ಕವಳ್ಳಿಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಿದ್ದರಿಂದ ಈ ಭಾಗದ ಭತ್ತದ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ‘ಪ್ರಜಾವಾಣಿ’ ಮಂಗಳವಾರ ‘ಭತ್ತದ ಕಣಜದವರಿಗಿಲ್ಲ ಭತ್ತ ಖರೀದಿ ಕೇಂದ್ರದ ಭಾಗ್ಯ’ ಎಂಬ ಶೀರ್ಷಿಕೆ ಯಡಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು.
ಈ ವರದಿ ಬಂದ ಕೂಡಲೇ ಸಮಸ್ಯೆಯ ಕಡೆ ಗಮನಹರಿಸಿದ ತಾಲ್ಲೂಕು ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎ.ಅಬುಬಕರ್ ತಹಶೀಲ್ದಾರ್ ಜೆ.ಕೃಷ್ಣಮೂರ್ತಿ ಅವರೊಂದಿಗೆ ಚರ್ಚಿಸಿ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಪಟ್ಟಣ ಪಂಚಾಯಿತಿಯ ಸಮುದಾಯ ಭವನದಲ್ಲಿ ಭತ್ತ ಖರೀದಿ ಕೇಂದ್ರದ ಪ್ರಾರಂಭಕ್ಕೆ ಸ್ಥಳ ನಿಗದಿಗೊಳಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದು ಇದೇ 7 ಶನಿವಾರ ಮಧ್ಯಾಹ್ನ ಭತ್ತ ಖರೀದಿ ಕೇಂದ್ರ ಉದ್ಘಾಟನಾ ಸಮಾರಂಭ ನಡೆಯಲಿದೆ. ರೈತರು ಭತ್ತ ಖರೀದಿ ಕೇಂದ್ರದ ಸದುಪಯೋಗ ಪಡಿಸಿ ಕೊಳ್ಳಬೇಕೆಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭತ್ತದ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ,ಆಹಾರ ಇಲಾಖೆ ಮುಖ್ಯಸ್ಥರು, ತಹಶೀಲ್ದಾರ್ ಹಾಗೂ ತಾಲ್ಲೂಕು ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಅವರಿಗೆ ರೈತರು ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.