ಕಡೂರು: ಪುರಸಭೆಯ ಉಪಚುನಾ ವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ದೊರೆತಿರುವುದು ಪಕ್ಷ ಕ್ಷೇತ್ರದಲ್ಲಿ ಬಲವಾಗಿ ಸಂಘಟನೆಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ತಿಳಿಸಿದರು.
ಕಡೂರಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖಂಡರ ಸಂಘಟಿತ ಪ್ರಯತ್ನದಿಂದ ಪಟ್ಟಣದಲ್ಲಿ ಈ ಗೆಲುವು ದೊರೆತಿದೆ. ಬಳ್ಳೇಕೆರೆ ಗ್ರಾಮ ಪಂಚಾಯಿತಿಯ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹೇಂದ್ರ ಗೆಲುವು ಸಾಧಿಸಿರುವುದು ಗ್ರಾಮಾಂತರ ಪ್ರದೇಶ ದಲ್ಲೂ ಪಕ್ಷದ ಸಂಘಟನೆ ಬಲವಾಗಿದೆ ಎಂಬುದು ಸಾಬೀತಾಗಿದೆ ಎಂದರು.
ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಚಂದ್ರಪ್ಪ ಮಾತನಾಡಿ, ‘ಎಲ್ಲ ಮುಖಂಡರು ಒಮ್ಮತದಿಂದ ದುಡಿದರೆ ಗೆಲುವು ಸಿಗುತ್ತದೆ ಎಂಬುದಕ್ಕೆ ಈ ಉಪ ಚುನಾವಣೆಗಳು ಸಾಕ್ಷಿಯಾಗಿವೆ. ಪಕ್ಷ ಯಾರಿಗೆ ಅವಕಾಶ ನೀಡಿದರೂ ಅವರ ಗೆಲುವಿಗಾಗಿ ಯಾವುದೇ ಭಿನ್ನಾಭಿಪ್ರಾಯ ತೊರದೆ ದುಡಿದಲ್ಲಿ ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಆರ್. ಮಹೇಶ್ ಒಡೆಯರ್, ಶರತ್ ಕೃಷ್ಣಮೂರ್ತಿ, ಬೀರೂರು ಬ್ಲಾಕ್ ಅಧ್ಯಕ್ಷ ಕೆ.ಎಂ. ವಿನಾಯಕ, ಪುರಸಭಾ ಸದಸ್ಯರಾದ ಕೆ.ಎಂ. ಮೋಹನ್ ಕುಮಾರ್ (ಮುದ್ದು), ಎಂ. ಸೋಮಶೇಖರ್, ಎನ್. ಬಷೀರ್ ಸಾಬ್, ಕೆ.ಜಿ. ಶ್ರೀನಿವಾಸಮೂರ್ತಿ, ಸಾವಿತ್ರಿ ಗಂಗಣ್ಣ, ಪುರಸಭೆ ಅಧ್ಯಕ್ಷ ಎಂ. ಮಾದಪ್ಪ, ಖಲೀಂ, ಷರೀಪ್, ಅನ್ಸರ್(ಬೆಕ್ಕು), ಮಂಡಿ ಇಕ್ಬಾಲ್, ಮೈಲಾರಪ್ಪ, ಮಹಾಲಿಂಗಪ್ಪ, ಖಲೀಮುಲ್ಲಾ, ಅಜೇಯ್ಒಡೆಯರ್, ವಕ್ತಾರ ಬಾಸೂರು ಚಂದ್ರಮೌಳಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.