ಚಿಕ್ಕಮಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ವಿಶ್ವ ಕನ್ನಡ ತೇರಿಗೆ ಸೋಮವಾರ ಚಾಲನೆ ನೀಡಲಾಯಿತು. ನಗರದ ಆಜಾದ್ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರಾಮಣ್ಣ ಅವರು ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸುಬ್ರಾಯ ಕಾಮತ್, ಉಪವಿಭಾಗಾಧಿಕಾರಿ ದಯಾನಂದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಾದೇಗೌಡ, ಕನ್ನಡ ಶಕ್ತಿಕೇಂದ್ರದ ಡಾ.ಜೆ.ಪಿ.ಕೃಷ್ಣೇಗೌಡ, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು ಇದ್ದರು.
ಈ ಸಂದರ್ಭದಲ್ಲಿ ಡೊಳ್ಳು ಕುಣಿತ, ವೀರಗಾಸೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಂ.ಜಿ.ರಸ್ತೆ ಮೂಲಕ ರತ್ನಗಿರಿ ರಸ್ತೆವರೆಗೆ ಮೆರವಣಿಗೆಯಲ್ಲಿ ಸಂಚರಿಸಿದ ತೇರು ಬಳಿಕ ಲಿಂಗದಹಳ್ಳಿ, ತರೀಕೆರೆ, ಕಡೂರಿಗೆ ತೆರಳಿತು.
ಇದೇ.8ರಂದು ವಿಶ್ವ ಕನ್ನಡ ತೇರು ಚಿಕ್ಕಮಗಳೂರಿನಿಂದ ಮೂಡಿಗೆರೆ, ಬಾಳೆಹೊನ್ನೂರು ಮೂಲಕ ಶೃಂಗೇರಿಗೆ ತೆರಳಲಿದೆ. 9ರಂದು ಶೃಂಗೇರಿಯಿಂದ ಕೊಪ್ಪ, ಕುದ್ರೆಗುಂಡಿ, ಎನ್.ಆರ್.ಪುರ ಮೂಲಕ ಸಂಚರಿಸಿ ಬೆಳಗಾವಿಗೆ ತೆರಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.