
ಕೊಪ್ಪ: ಕಾನೂನು ಸೇವಾ ಸಮಿತಿ ಉಚಿತ ಕಾನೂನು ನೆರವು-ಅರಿವು, ತ್ವರಿತ ನ್ಯಾಯ ವಿತರಣೆಗೆ ಶ್ರಮಿಸುತ್ತಿದೆ ಎಂದು ಇಲ್ಲಿನ ಸಿವಿಲ್ ನ್ಯಾಯಾಧೀಶ ಸಿ.ವೀರಭದ್ರಯ್ಯ ಹೇಳಿದರು.ಇಲ್ಲಿನ ನ್ಯಾಯಾಲಯಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಕ್ಷಿದಾರರರಿಗೆ ಕಾನೂನು ಅರಿವು-ನೆರವು, ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾನೂನಿನ ಬಗ್ಗೆ ಅರಿವಿದ್ದಾಗ ನಾಗರಿಕರು ತಮ್ಮ ಹಕ್ಕುಗಳನ್ನು ಯಶಸ್ವಿಯಾಗಿ ಪಡೆದುಕೊಳ್ಳಬಹುದು. ಕಾನೂನು ಸೇವಾ ಸಮಿತಿ ನ್ಯಾಯಾಲಯದಲ್ಲಿ `ಲೀಗಲ್ ಏಯ್ಡೆಡ್ ಕ್ಲಿನಿಕ್~ ಆರಂಭಿಸಲಾಗಿದೆ. ಇಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಇಬ್ಬರು ವಕೀಲರು ಕಾನೂನಿನ ಕುರಿತು ಮಾರ್ಗದರ್ಶನ ಮಾಡುವರು ಎಂದರು.
ನ್ಯಾಯಾಂಗ ಇಲಾಖೆ ಕಾನೂನು ಅರಿವು ಮೂಡಿಸಲು ಪ್ರತಿದಿನ ಕಾರ್ಯ ಪ್ರವೃತ್ತವಾಗಿದೆ. ವಾರದಲ್ಲಿ ಮೂರುದಿನ ತಾಲ್ಲೂಕು ಕಚೇರಿ, ಸಿಡಿಪಿಒ ಕಚೇರಿ, ಸಂತೆಕಟ್ಟೆಯಲ್ಲಿ ವಕೀಲರ ಮೂಲಕ ಉಚಿತ ಕಾನೂನು ಅರಿವು ನೀಡುತ್ತಿದೆ ಎಂದರು.
ಪಂಚಾಯಿತಿಕಟ್ಟೆ ಮಾದರಿಯಲ್ಲೇ ನ್ಯಾಯಾಂಗ ವ್ಯವಸ್ಥೆ ಇದೆ ಎಂದ ಅವರು ಸಾಮಾನ್ಯ ಜ್ಞಾನದ ಕ್ರೋಡೀಕರಣವೇ ಕಾನೂನು. ಬಡತನ ರೇಖೆಗಿಂತ ಕೆಳಗಿನವರು, ಪರಿಶಿಷ್ಟ ಜಾತಿ, ಪಂಗಡದವರು, ಮಹಿಳೆಯರು, ಅಂಗವಿಕಲರು ಉಚಿತವಾಗಿ ಕಾನೂನು ಸೇವೆ ಪಡೆದುಕೊಳ್ಳಬಹುದು ಎಂದರು.
ಪೊಲೀಸ್ ವೃತ್ತ ನಿರೀಕ್ಷಕ ಸೂರಜ್ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ಅರಿವು-ನೆರವು ದೊರೆಯಬೇಕು. ಈ ನಿಟ್ಟಿನಲ್ಲಿ ಸಂಚಾರಿ ರಥದ ಮೂಲಕ ಗ್ರಾಮೀಣ ಜನರಲ್ಲಿ ಕಾನೂನಿನ ಅರಿವು ಮೂಡಿಸಲಾಗುತ್ತಿದೆ ಎಂದರು.
ವಕೀಲ ನಾರಾಯಣ ಸ್ವಾಮಿ ಮಹಿಳೆ ಮತ್ತು ಕಾನೂನು, ವಕೀಲ ಎಚ್.ಎಸ್.ಆದರ್ಶ ಸಾಮಾನ್ಯ ಕಾನೂನಿನ ಕುರಿತು ಮಾಹಿತಿ ನೀಡಿದರು. ತಾಲ್ಲೂಕು ವಕೀಲರ ಸಂಘ ಅಧ್ಯಕ್ಷ ಸೀತೂರು ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಲಿಂಗಪ್ಪಗೌಡ, ಹಿರಿಯ ವಕೀಲರಾದ ಮೀಗ ಚಂದ್ರಶೇಖರ್, ಟಿ.ಡಿ. ಪ್ರಸನ್ನ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.