ಕಡೂರು: ಸರ್ಕಾರದಲ್ಲಿ ಹಣ ಇದೆ. ಆದರೆ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಜಿಲ್ಲಾ ಪಂಚಾಯಿತಿ ಎಂಜಿನಿಯರ್ಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅಧಿಕಾರಿಗಳಿಗೆ ಒಂದು ವಾರ ಗಡುವು ನೀಡಿದ್ದು ಅಷ್ಟರಲ್ಲಿ ಸಮಸ್ಯೆ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಂಗೇಗೌಡ ಎಚ್ಚರಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕಿನ ಪಿಡಿಒ ಮತ್ತು ಎಂಜಿನಿಯರ್ಗಳ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಸಭೆಯ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಶಾಸಕ ಡಾ.ವೈ.ಸಿ.ವಿಶ್ವನಾಥ್ ಆದೇಶಿಸಿದರು.
ಎಂಜಿನಿಯರ್ ಮತ್ತು ಪಿಡಿಓ ಗಳ ಮಧ್ಯೆ ಸಂಪರ್ಕ, ಸಹಕಾರದ ಕೊರತೆಯಿಂದ ಸಮಸ್ಯೆ ತಲೆದೋರಿದೆ. ಇಬ್ಬರ ಅಂಕಿ ಅಂಶಗಳು ತಾಳೆಯಾಗುವುದಿಲ್ಲ ಎಂದು ಶಾಸಕರು ಅಧಿಕಾರಿಗಳ ಮೇಲೆ ಕೋಪಗೊಂಡರು. ಎಂಜಿನಿಯರ್ಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ ಎಂದು ಸಿಇಒ ಹೇಳಿದರು.
ತಾಲ್ಲೂಕಿನ ಬಹುತೇಕ ಗ್ರಾಮಗಳ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೆಲವು ಕೊಳವೆ ಬಾವಿಗಳು ದುರಸ್ಥಿ ಆಗಬೇಕು ಎಂದು ಪಿಡಿಒ ಗಳು ಸಭೆಯ ಗಮನಕ್ಕೆ ತಂದಾಗ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಎಮ್ಮೆದೊಡ್ಡಿ ಭಾಗದ ಗ್ರಾಮಗಳಲ್ಲಿ ನೀರಿದೆ. ಆದರೆ ವಿದ್ಯುತ್ ಅಭಾವದಿಂದ ಸಮಸ್ಯೆ ಉಂಟಾಗಿವೆ. ಪೈಪ್ಲೈನ್ ದುರಸ್ಥಿ, ಅಧಿಕಾರಿಗಳು, ನೀರುಗಂಟಿಗಳ ಕಾರ್ಯವೈಖರಿಯನ್ನು ಸರಸ್ವತಿಪುರ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ನಾಗರಾಜು ಸಭೆಯ ಗಮನಕ್ಕೆ ತಂದರು.
ಕೊಳವೆ ಬಾವಿ ಸ್ವಚ್ಛತೆ, ಆಳ ಹೆಚ್ಚಿಸಲು ಒಂದೇ ಬೋರ್ ಲಾರಿಯನ್ನು ಬಳಸುತ್ತಿರುವುದರಿಂದ ಕೆಲಸ ಕುಂಠಿತವಾಗಿದೆ. ಮತ್ತೊಂದು ಏಜೆನ್ಸಿಯನ್ನು ಸಂಪರ್ಕಿಸಿ ಕೆಲಸ ಚುರುಕುಗೊಳಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಹುಲಿಕೆರೆ, ಉಳಿಗೆರೆ, ಜೋಡಿ ತಿಮ್ಮಾಪುರ, ಸ್ವಾಮಿಕಟ್ಟೆ, ಗೊಲ್ಲರಹಟ್ಟಿ, ಮತಿಘಟ್ಟ, ಚೀಲನಹಳ್ಳಿ, ನಾಗಗೊಂಡನಹಳ್ಳಿ, ಎಸ್.ಬಿದರೆ, ವಡೇರಹಳ್ಳಿ, ಕಾಮನಕೆರೆ, ಸೀಗೆಹಡ್ಲು, ಮುಗಳಿಕಟ್ಟೆ, ಕೊತ್ತಿಗೆರೆ, ಗಂಗನಹಳ್ಳಿ, ಕಲ್ಕೆರೆ, ಗರ್ಜೆ, ಮಾದಾಪುರ, ಸೂರಾಪುರ, ಹುಲೀಹಳ್ಳಿ, ಬಿಳವಾಲ, ಆಸಂದಿ, ಪುರ, ದೊಣ್ಣೆಕೋರನಹಳ್ಳಿ, ನಿಡುವಳ್ಳಿ, ವೈ.ಮಲ್ಲಾಪುರ, ಪಿಳ್ಳೇನಹಳ್ಳಿ, ಸಿದ್ರಹಳ್ಳಿ, ಗಾಳಿಗುತ್ತಿ, ಶ್ರೀರಾಂಪುರ, ಕಂಚಗಲ್ಲು, ಚಿಕ್ಕದೇವನೂರು, ಡಿ.ಕಾರೇಹಳ್ಳಿ ಗ್ರಾಮಗಳ ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಕಾಣಿಸಿದೆ.
ಕೆಲವು ಕಡೆ ಕೈ ಪಂಪ್ ಅಳವಡಿಸಲು, ವಿದ್ಯುತ್ ಸರಬರಾಜು ನೀಡಲು ಮೆಸ್ಕಾಂ ಅಧಿಕಾರಿಗಳಿಗೆ ಆದೇಶಿಸಲಾಯಿತು. ಸಿಇಒ ರಂಗೇಗೌಡ ಅಧಿಕಾರಿಗಳ ಅಸಮರ್ಪಕ ಉತ್ತರದಿಂದ ಬೇಸತ್ತು ಒಂದು ವಾರ ಗಡುವು ನೀಡಿದ್ದು, ಹಣ ನೀಡುತ್ತೇವೆ. ಎಲ್ಲೆಲ್ಲಿ ಕೊಳವೆ ಬಾವಿ ದುರಸ್ಥಿ ಮಾಡಿಸಬೇಕು, ಹೊಸ ಬೋರ್ವೆಲ್ ಕೊರೆಸಿಯಾದರೂ ನೀರು ನೀಡಬೇಕು. ಮಾರ್ಚ್ 10 ರ ವರೆಗೆ ಪ್ರತಿದಿನ ತಾಲ್ಲೂಕಿಗೆ ಭೇಟಿ ನೀಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿದರು.
ತಾಲ್ಲೂಕಿನಲ್ಲಿ ಮಾರ್ಚ್ ಒಂದರಿಂದ ಒಂದು ವಾರ ಕಾಲ ಕುಡಿಯುವ ನೀರಿನ ಸಪ್ತಾಹ ಕಾರ್ಯವನ್ನು ಹಮ್ಮಿಕೊಂಡು ಪ್ರತಿ ಗ್ರಾಮಗಳಲ್ಲಿರುವ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಿ ಸುಣ್ಣ ಬಳಿಸಬೇಕು ಎಂದು ಪಿಡಿಒ , ಕಾರ್ಯದರ್ಶಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಶಿರೇಖ ಸುರೇಶ್, ಮಾಲಿನಿಬಾಯಿ ರಾಜನಾಯ್ಕ, ಪದ್ಮಚಂದ್ರಪ್ಪ, ಬಿ.ಪಿ.ನಾಗರಾಜು, ತಾ.ಪಂ.ಅಧ್ಯಕ್ಷೆ ಮಲ್ಲಿಗಮ್ಮ ಲೋಕೇಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಟಿ.ಎನ್.ಮೂರ್ತಿ, ಶಂಕರನಾಯ್ಕ ಸೇರಿದಂತೆ 9 ಎಂಜಿನಿಯಗಳು, ಮೆಸ್ಕಾಂ, ಮೊದಲಾದ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.