ಕೊಪ್ಪ: ತಾಲ್ಲೂಕಿನ ಮೊದಲಮನೆ ಗುಡ್ಡ ಮತ್ತು ಹುಲುಗಾರು ಗುಡ್ಡಗಳಲ್ಲಿ 3 ದಿನಗಳಿಂದ ಆತಂಕ ಸೃಷ್ಟಿಸಿದ್ದ ಕಾಳ್ಗಿಚ್ಚನ್ನು ಮಂಗಳವಾರ ಬೆಳಗಿನ ಜಾವ ಸಂಪೂರ್ಣ ಶಮನಗೊಳಿಸುವಲ್ಲಿ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಸೋಮವಾರ ರಾತ್ರಿ ಮೊದಲಮನೆ ಗುಡ್ಡದ ಮೇಲ್ ಓಣಿತೋಟ ಭಾಗದಲ್ಲಿ ಅಪಾರ ಪ್ರಮಾಣದ ಕಾಡು ಬೆಂಕಿಗೆ ಆಹುತಿಯಾಗಿತ್ತು. ದುರಂತ ನಡೆದ ಗುಡ್ಡದ ಇಳಿಜಾರಿಗೆ ದುರ್ಗಮ ದಾರಿಯಲ್ಲಿ ತಲುಪಲು ಅಗ್ನಿಶಾಮಕ ವಾಹನಕ್ಕೆ ಸಾಧ್ಯವಾಗದೆ 25ಕ್ಕೂ ಹೆಚ್ಚು ಹೋಸ್ಪೈಪ್ ಅಳವಡಿಸಿ ಬೆಳಗಿನ ಜಾವದವರೆಗೂ ನೀರು ಹಾಯಿಸಿ ಮುಕ್ಕಾಲು ಭಾಗದಷ್ಟು ಬೆಂಕಿಯನ್ನು ನಂದಿಸಲಾಯಿತು.
ಮಂಗಳವಾರ ಬೆಳಿಗ್ಗೆ ಪಟ್ಟಣ ಪಂಚಾಯಿತಿಯ ಮಿನಿ ಟ್ಯಾಂಕರ್ ಮೂಲಕ ಗುಡ್ಡದ ಇಳಿಜಾರು ತಲುಪಿ ಅಳಿದುಳಿದ ಬೆಂಕಿ ಕೆಂಡಗಳಿಗೂ ನೀರು ಹಾಯಿಸಿ ನಂದಿಸಲಾಯಿತು. ಅರಣ್ಯ ಇಲಾಖೆ ಹಾಗೂ ಕೊಪ್ಪ, ಮತ್ತು ಶೃಂಗೇರಿ ಅಗ್ನಿಶಾಮಕ ಕೇಂದ್ರಗಳ 60ಕ್ಕೂ ಹೆಚ್ಚು ಸಿಬ್ಬಂದಿ ಹರಸಾಹಸಪಟ್ಟು ಸಂಪೂರ್ಣ ಬೆಂಕಿ ನಂದಿಸಿದರಲ್ಲದೆ ಪಕ್ಕದ ಕಾಡಿಗೆ ಬೆಂಕಿ ಹರಡದಂತೆಯೂ ಮುನ್ನೆಚ್ಚರಿಕೆ ಕ್ರಮವಹಿಸಿದರು.
ಕಿಡಿಗೇಡಿಗಳ ಕೃತ್ಯದ ಶಂಕೆ: ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಿರುವುದೇ ಭಾರೀ ದುರಂತಕ್ಕೆ ಕಾರಣ ಎಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಕೂಡ ಇದೇ ಶಂಕೆಯಿಂದ ಪ್ರಕರಣ ದಾಖಲಿಸಿಕೊಂಡಿದೆ. ವಾರದ ಹಿಂದೆ ಮೊದಲಮನೆ ಗುಡ್ಡದ ಸೂರ್ಯಾಸ್ತ ಮಾನ ಗೋಪುರದಲ್ಲಿ ರಾತ್ರಿ ಹೊತ್ತು ಪಾನಮತ್ತ ಯುವಕರ ತಂಡವೊಂದು ಬೆಂಕಿ ಹಾಕಿಕೊಂಡು ನೃತ್ಯ ಮಾಡುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.