(ಎನ್.ಆರ್.ಪುರ): ತಾಲ್ಲೂ ಕಿನ ಹೊನ್ನೇಕೂಡಿಗೆ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಸಾರ್ಯ ಗ್ರಾಮದ ಕೂಸ್ಗಲ್ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ಕೊಸಗಲ್ ಮಿಥುನ್ ಎಂಬುವರ ಅಡಿಕೆ ತೋಟಕ್ಕೆ ಬಂದಿದ್ದ ಮೂರು ವರ್ಷದ ಹೆಣ್ಣು ಆನೆ ಮರಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದೆ.
ಮಿಥುನ್ ಎಂಬುವರ ಅಡಿಕೆ ತೋಟಕ್ಕೆ ಭಾನುವಾರ ರಾತ್ರಿ ಸಮೀಪದ ಭದ್ರಾ ಅಭಯಾರಣ್ಯದಿಂದ ಭದ್ರಾಹಿನ್ನೀರು ದಾಟಿ ಬಂದ ಹೆಣ್ಣು ಮರಿ ಆನೆಯು ಅಡಿಕೆತೋಟದ ಕಾಲುವೆಯಲ್ಲಿ ನಿಶ್ಯಕ್ತಿಯಿಂದ ಮೇಲೆಕ್ಕೆ ಏಳಲಾಗದೆ ಬಿದ್ದುಕೊಂಡಿತ್ತು. ಅದನ್ನು ಉಳಿ ಸಲು ಅರಣ್ಯ ಇಲಾಖೆ ಎಲ್ಲ ರೀತಿಯ ಪ್ರಯತ್ನವನ್ನು ಮಾಡಿತ್ತು.
ಸೋಮವಾರ ಪಶುವೈದ್ಯಾಧಿಕಾರಿ ಡಾ.ವಿಜಯ ಕುಮಾರ್, ಆನೆಗೆ ಪ್ರಥಮ ಚಿಕಿತ್ಸೆ ನೀಡಿದಾಗ ಆನೆ ಚೇತರಿಸಿಕೊಂಡಿತ್ತು. ಸಂಜೆ ವೇಳೆಗೆ ಶಿವಮೊಗ್ಗದ ಪಶು ವೈದ್ಯಾಧಿಕಾರಿ ಡಾ.ವಿನಯ್ ಬಂದು ತಡರಾತ್ರಿವರೆಗೂ ಚಿಕಿತ್ಸೆ ಮುಂದುವರೆ ಸಿದ್ದರು. ಶಿವಮೊಗ್ಗದ ಸಕ್ರೆಬೈಲಿನಿಂದ ಮಾವುತರು ಬಂದು ಆನೆಯ ಚಿಕಿತ್ಸೆಗೆ ನೆರವಾದರು. ನಂತರ ಆನೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ, ಬೆಳಿಗ್ಗೆ 7ಗಂಟೆ ವೇಳೆಗೆ ಆನೆ ಮರಿ ಮೃತಪಟ್ಟಿತು.
ಆನೆ ಮರಿಯ ಹೊಟ್ಟೆಯಲ್ಲಿ ಲಾಡಿ ಹುಳುಗಳು ಹೆಚ್ಚಾಗಿ ನಿಶ್ಯಕ್ತಿಗೊಂಡಿರ ಬಹುದು ಎಂದು ಪಶುವೈದ್ಯಾಧಿಕಾರಿ ಡಾ.ವಿನಯ್ ತಿಳಿಸಿದರು. ಅಡಿಕೆಯ ತೋಟದಲ್ಲಿಯೇ ಆನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ನಂತರ ಗ್ರಾಮಸ್ಥರು ಹಾಗೂ ಇಲಾಖೆಯವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಆನೆಯನ್ನು ದಹಿಸಿದರು. ಕೊಪ್ಪ ಡಿಎಫ್ಒ ಬಸವರಾಜಯ್ಯ, ಎಸಿಎಫ್ ಬೋರಯ್ಯ, ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಇದ್ದರು.
* *
ಆನೆಯನ್ನು ಉಳಿಸಲು ಸತತವಾಗಿ ಪ್ರಯತ್ನಿಸಲಾಯಿತು. ಸೋಮವಾರ ರಾತ್ರಿ ಎದ್ದು ಓಡಾಡಿದ್ದ ಆನೆ ಮರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿತು.
ಮೋಹನ್ಕುಮಾರ್
ವಲಯ ಅರಣ್ಯಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.