ಅಜ್ಜಂಪುರ: ಅಭಿವೃದ್ದಿಯ ಹೆಸರಲ್ಲಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ನಡೆಯುತ್ತಿರುವ ಮರಗಳ ಮಾರಣಹೋಮ ನಿಂತು, ಪ್ರತಿಯೊಬ್ಬರಲ್ಲೂ ಗಿಡಮರ ಬೆಳೆಸುವ ಮನೋಭಾವ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆಯಾಗುವ, ಜೀವಸಂಕುಲ ಉಳಿಯುವ, ಅಂತರ್ಜಲ ಹೆಚ್ಚಾಗುವ ಸಂಭವವಿದೆ ಎಂದು ಚಿಂತನ ಫೌಂಡೇಷನ್ ನಿರ್ದೇಶಕ ಜಿ.ಚನ್ನಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಸಮೀಪದ ಬಗ್ಗವಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ಮಂಗಳವಾರ ನಡೆದ `ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನ ಹಾಗೂ ಜೀವ ವೈವಿಧ್ಯ ಸಂರಕ್ಷಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾತಾವರಣದ ಸಮತೋಲನ ಕಾಪಾಡುವಲ್ಲಿ ಗಿಡ ಮರಗಳು ಪ್ರಮುಖ ಪಾತ್ರವಹಿಸುವುದರಿಂದ ಗಿಡ ಮರ ರಕ್ಷಣೆಗೆ ಎಲ್ಲರೂ ಪ್ರಯತ್ನಿಸಬೇಕು. ಸರ್ಕಾರ ಹಸಿರು ಹೊನ್ನು ಮತ್ತು ಕೃಷಿ ಅರಣ್ಯ ಯೋಜನೆಯಡಿ ಗಿಡಗಳನ್ನು ನೀಡುತ್ತಿದ್ದು, ಕೃಷಿಕರು ಸಸಿ ಪಡೆದು ಕೃಷಿ ಭೂಮಿಯ ಅಂಚಿನಲ್ಲಿ ಬೆಳೆಸಿ, ಲಾಭಗಳಿಸುವ ಜತೆಗೆ ಪರಿಸರ ಸಂರಕ್ಷಣೆಯ ಕೊಡುಗೆ ನೀಡಬೇಕು ಎಂದು ವಲಯ ಅರಣ್ಯಾಧಿಕಾರಿ ಶಿವಶಂಕರ್ ಸಲಹೆ ನೀಡಿದರು.
`ಗಿಡ ಮರ ಬೆಳೆಸುವ, ಪರಿಸರ ಉಳಿಸುವ, ವನ್ಯಪ್ರಾಣಿಗಳ ಸಂರಕ್ಷಿಸುವ ನಿಟ್ಟಿನಲ್ಲಿ ತಮ್ಮ ಜೀವನವಿಡೀ ಹೋರಾಟ ನಡೆಸಿರುವ ಮೇಧಾ ಪಾಟ್ಕರ್, ಪಾಂಡುರಂಗ ಹೆಗ್ಗಡೆ, ಸಾಲುಮರದ ತಿಮ್ಮಕ್ಕ ಅವರ ಸಾಧನೆ ನಮಗೆ ಆದರ್ಶವಾಗಿದ್ದು, ಅವರ ದಾರಿಯಲ್ಲಿ ನಡೆದು ಪರಿಸರ ಉಳಿಸುವ ಕೆಲಸ ಕೈಗೊಳ್ಳಬೇಕಿದೆ' ಎಂದು ಶಿಕ್ಷಕ ಬಸವರಾಜ್ ನಾಯ್ಕ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಶಾಲಾ ಮುಖ್ಯ ಶಿಕ್ಷಕ ದೇವರಾಜ್, ಚಿಕ್ಕಮಗಳೂರಿನ ಎಐಟಿ ಯ ಮಾಹಿತಿ ಹಾಗೂ ಪ್ರಾತ್ಯಾಕ್ಷಿಕ ಕೇಂದ್ರದ ಅನಿತಾ, ಅಜ್ಜಂಪುರ ಗ್ರಾ.ಪಂ. ಸದಸ್ಯೆ ಚಿತ್ರಾವತಿ ಮಾತನಾಡಿದರು. ಚಿಂತನ ಫೌಂಡೇಷನ್ನ ಲೆಕ್ಕಾಧಿಕಾರಿ ನಯಾಜ್ ಅಹಮದ್, ಸಂಯೋಜಕ ಕೆ.ಜಿ.ಸಂತೋಷ್, ಶಾಲಾ ಶಿಕ್ಷಕರು, ಗ್ರಾಮದ ಮೈಲಾರಲಿಂಗೇಶ್ವರ, ಅಕ್ಕನಾಗಮ್ಮ, ವಿನಾಯಕ ಸ್ವಸಹಾಯ ಸಂಘಗಳ ಸದಸ್ಯರು, ಮಕ್ಕಳು ಪಾಲ್ಗೂಂಡಿದ್ದರು.
ಕಾರ್ಯಕ್ರಮವನ್ನು ಚಿಂತನ ಫೌಂಡೇಷನ್, ಪರಿಸರ ಮತ್ತು ಅರಣ್ಯ ಸಚಿವಾಲಯ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಕರ್ನಾಟಕ ಅರಣ್ಯ ಇಲಾಖೆ, ಸರ್ಕಾರಿ ಪೌಢ ಶಾಲೆ ಬಗ್ಗವಳ್ಳಿ, ಜಿಲ್ಲಾ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕ ಕೇಂದ್ರ ಹಾಗೂ ಬಗ್ಗವಳ್ಳಿ ಗ್ರಾಂ.ಪಂ. ಸಂಯುಕ್ತವಾಗಿ ಏರ್ಪಡಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.