ADVERTISEMENT

ಗುಡಿ ಕೈಗಾರಿಕೆಗಳಿಗೆ ಬೆಂಬಲ ಅಗತ್ಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 6:10 IST
Last Updated 28 ಫೆಬ್ರುವರಿ 2011, 6:10 IST

ಕಡೂರು: ನೂತನ ಕೈಗಾರಿಕಾ ನೀತಿ ಅಳವಡಿಸಿ ಗ್ರಾಮೀಣ ಪ್ರದೇಶಗಳಿಗೆ ಗುಡಿ ಕೈಗಾರಿಕೆ ಪರಿಚಯಿಸುವುದರಿಂದ ನಿರುದ್ಯೋಗಿ ಯುವ ಕರನ್ನು ಉತ್ತೇಜಿಸಿ ಉದ್ಯೋಗ ಸೃಷ್ಟಿಸಲು ಸಾಧ್ಯ ಎಂದು ಶಾಸಕ ಡಾ.ವೈ.ಸಿ. ವಿಶ್ವನಾಥ್ ಅಭಿಪ್ರಾಯಪಟ್ಟರು.

 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಶ್ರೀದುರ್ಗಾಶಕ್ತಿ ಮಹಿಳಾ ಸ್ವಸಹಾಯ ಸಂಘ ಸಂಯುಕ್ತಾಶ್ರಯದಲ್ಲಿ ಬುಧವಾರ ಜೋಡಿ ತಿಮ್ಮಾಪುರದ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದ್ದ ಜೇನು ಕೃಷಿ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

 ಗ್ರಾಮೀಣ ಪ್ರದೇಶದ ಶೇ.30ಕ್ಕೂ ಹೆಚ್ಚು ಕುಟುಂಬಗಳು ಉದ್ಯೋಗ ಅವಲಂಬಿಸಿ ನಗರಗಳಿಗೆ ವಲಸೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ಭೂ ಬ್ಯಾಂಕ್ ಅಭಿವೃದ್ಧಿಪಡಿಸಿ ಅನೇಕ ಹೊಸ ಕೈಗಾರಿಕೆಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ನೀಡಿದರೆ ಸ್ಥಳೀಯವಾಗಿ ವಾಸಿಸುವ ನಿರುದ್ಯೋಗಿ ಯುವಕರು, ಮಹಿ ಳೆಯರು, ಹಿಂದುಳಿದವರಿಗೆ ಉದ್ಯೋಗ ದೊರಕಲಿದೆ ಎಂದರು.
ಕೃಷಿ ಜೊತೆಗೆ ಉಪಕಸುಬಾಗಿ ಜೇನುಕೃಷಿ ಅಳವಡಿಸಿಕೊಂಡರೆ ಆರ್ಥಿಕವಾಗಿ ಮುಂದೆ ಬರಲು ಸಾಧ್ಯ ಎಂದರು.

ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ಬಿ.ಪಿ. ಶಿವಮೂರ್ತಿ ಮಾತನಾಡಿ, ಗ್ರಾಮೀ ಣರ ಬದುಕಿಗೆ ಸ್ವ ಉದ್ಯೋಗ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಜೇನುಕೃಷಿ ಪರಿಚಯಿಸುತ್ತಿದ್ದು, ಕೈಗಾರಿಕಾ ಕುಶಲಕರ್ಮಿಗಳು ಸಾಲ ಸೌಲಭ್ಯಗಳನ್ನು ಪಡೆದು ಜೀವನೋಪಾಯಕ್ಕೆ ನೂತನ ಮಾರ್ಗಗಳನ್ನು ಕಂಡುಕೊಳ್ಳಬೇಕು. ಕೈಗಾರಿಕಾ ಇಲಾಖೆಯಿಂದ ನೂರು ವಿವಿಧ ಚಟುವಟಿಕೆಗಳಿಗೆ 25 ಲಕ್ಷಕ್ಕೂ ಹೆಚ್ಚು ಸಾಲ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡುತ್ತಿದ್ದು ಪಿಎಂಇಜಿಪಿ ಯೋಜನೆಯಡಿಯಲ್ಲಿ 232 ಅರ್ಜಿಗಳು ಬಂದಿದ್ದು, 69 ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. 14 ಫಲಾನುಭವಿಗಳಿಗೆ ಈಗಾಗಲೇ 73.22 ಲಕ್ಷ ಸಾಲ ಬಿಡುಗಡೆ ಮಾಡಿರುವುದಾಗಿ ತಿಳಿ ಸಿದರು.

ಜಿ.ಪಂ. ಸದಸ್ಯ ಸತೀಶ್ ವ್ಯವಸಾಯದ ಜೊತೆಗೆ ಹೈನುಗಾರಿಕೆ, ಕುರಿ, ಜೇನು ಸಾಕಾಣಿಕೆಯಿಂದ ಜೀವನ ಭದ್ರತೆ ಹೆಚ್ಚುತ್ತದೆ ಎಂದರು. ಕಡೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ದೇವರಾಜ್, ತಾ.ಪಂ.ಅಧ್ಯಕ್ಷೆ ಎ.ಇ.ರತ್ನ, ಉಪಾಧ್ಯಕ್ಷೆ ಗೀತಾಪ್ರಭಾಕರ್ ಮಾತನಾಡಿದರು. ಜೋಡಿತಿಮ್ಮಾಪುರ ಗ್ರಾಪಂ ಅಧ್ಯಕ್ಷೆ ಪ್ರೇಮಾ ಅಧ್ಯಕ್ಷತೆ ವಹಿಸಿದ್ದರು.ತಾಲ್ಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ವೀರೇಶ್ ನಾಯ್ಕ, ಜೇನು ಕೃಷಿ ತರಬೇತುದಾರರು, ದುರ್ಗಾಶಕ್ತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.