ADVERTISEMENT

ಜಗಜೀವನರಾಮ್ 104ನೇ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 8:15 IST
Last Updated 6 ಏಪ್ರಿಲ್ 2011, 8:15 IST
ಜಗಜೀವನರಾಮ್ 104ನೇ ಜನ್ಮದಿನಾಚರಣೆ
ಜಗಜೀವನರಾಮ್ 104ನೇ ಜನ್ಮದಿನಾಚರಣೆ   

ಚಿಕ್ಕಮಗಳೂರು: ಬಾಬು ಜಗಜೀವನ್ ರಾಮ್ ಅವರ ಧೈರ್ಯ, ತಟಸ್ಥ ಹಾಗೂ ಹೋರಾಟದ ಮನೋಭಾವದ ಗುಣಗಳಂತಹ ಆದರ್ಶಗಳನ್ನು ರೂಢಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ಕರೆ ನೀಡಿದರು.ಅವರು ಮಂಗಳವಾರ ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಬೆ, ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬು ಜಗಜೀವನ್‌ರಾಮ್ ರವರ 104ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ  ಅವರು  ಮಾತನಾಡಿದರು.

ಬಾಬು ಜಗಜೀವನ್‌ರಾಮ್‌ರವರು ವಿದ್ಯಾರ್ಥಿ ಜೀವನದಲ್ಲಿಯೇ ಹೋರಾಟದ ಮನೋಭಾವನೆ ರೂಢಿಸಿಕೊಂಡು ಈ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದರ ಜೊತೆಗೆ ಸರ್ಕಾರ ಆಡಳಿತದಲ್ಲಿ ಪ್ರಭಾವಿ ಸುಧಾರಣೆ ಮೂಲಕ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದವರ ಸಾಲಿನಲ್ಲಿ ಮೊದಲಿಗರು.ತ್ಯಾಗ ಮನೋಭಾವನೆ ಹೊಂದಿದ್ದ ಅವರು ಉಪರಾಷ್ಟ್ರಪತಿ ಹುದ್ದೆ ಅಲಂಕರಿಸಿ ರಾಷ್ಟ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದರು. ಜಿಪಂ ಅಧ್ಯಕ್ಷೆ ಪ್ರಪುಲ್ಲಾ ಮಂಜುನಾಥ್ ಮಾತನಾಡಿ, ಜಗಜೀವನ್‌ರಾಮ್ ಒಂದು ಜಾತಿಯ ಹಿನ್ನಲೆಯಲ್ಲಿ ಹೋರಾಟ ಮಾಡದೇ ಸಮಾಜದ  ಎಲ್ಲಾ ವರ್ಗಗಳ ಏಳಿಗೆ, ಸುಧಾರಣೆಗಾಗಿ ಮಾಡಿದ ಹೋರಾಟ ಮಹತ್ವದ್ದು ಎಂದರು.

ಜಿಪಂ ಸದಸ್ಯೆ ಹಾಗೂ ತೆಂಗು ಮತ್ತು ನಾರು ಮಂಡಳಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ದೇಶದಲ್ಲಿ ಹಸಿರು ಕ್ರಾಂತಿಯ ಹೊಸ ಶಕೆ ಆರಂಭಿಸಿದ ಕೀರ್ತಿ ಜಗಜೀವನ್‌ರಾಮ್ ಅವರಿಗೆ ಸಲ್ಲುತ್ತದೆ ಎಂದರು. ಅವರ ದೂರದೃಷ್ಟಿಯ ಫಲವಾಗಿ  ನಮ್ಮ ದೇಶ ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ. ಇವರ ಹೋರಾಟದ ಆಶಯಗಳ ಈಡೇರಿಕೆಗೆ ಎಲ್ಲರೂ ಶ್ರಮಿಸಬೇಕಿದೆ ಎಂದರು.

ಸಮಾರಂಭದಲ್ಲಿ ಐಡಿಎಸ್‌ಜಿ ಕಾಲೇಜಿನ ಪ್ರಾಧ್ಯಾಪಕ ಮೂಡಲಗಿರಿಯಪ್ಪ ಬಾಬು ಜಗಜೀವನ್‌ರಾಮ್ ಅವರ ಕುರಿತು ಉಪನ್ಯಾಸ ನೀಡಿದರು. ನಗರಸಭೆಯ ಪ್ರಭಾರ ಅಧ್ಯಕ್ಷೆ ಯಶೋಧಾ ಶಂಕರ್‌ರಾವ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಕನಕರಾಜ್, ಪದ್ಮಚಂದ್ರಪ್ಪ, ಎಸ್‌ಪಿ ವಿಕಾಸ್‌ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಮವಂತ್‌ಗೋಪಾಲ್, ದಲಿತ ಮುಖಂಡರಾದ ರಾಧಕೃಷ್ಣ, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.