ADVERTISEMENT

`ಜಾಗೃತ ಮತದಾನ ಉತ್ತಮ ಆಡಳಿತಕ್ಕೆ ಬುನಾದಿ'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 9:35 IST
Last Updated 3 ಏಪ್ರಿಲ್ 2013, 9:35 IST
ಚುನಾವಣಾ ಆಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆ  ಆಶ್ರಯದಲ್ಲಿ ಮಂಗಳವಾರ ನಡೆದ ಮತದಾನ ಜಾಗೃತಿ ಅಭಿಯಾನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ಪರಮೇಶ್ವರಪ್ಪ ಚಾಲನೆ ನೀಡಿದರು. ಮುಖ್ಯೋಪಾಧ್ಯಾಯ ಎಚ್. ಸಿ.ಹೊನ್ನಲಿಂಗಪ್ಪ, ಸಾದಿಕ್ ಪಾಷಾ, ಇಜಾಜ್ ಪಾಷಾ ಇನ್ನಿತರರು ಇದ್ದಾರೆ.
ಚುನಾವಣಾ ಆಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಡೆದ ಮತದಾನ ಜಾಗೃತಿ ಅಭಿಯಾನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ಪರಮೇಶ್ವರಪ್ಪ ಚಾಲನೆ ನೀಡಿದರು. ಮುಖ್ಯೋಪಾಧ್ಯಾಯ ಎಚ್. ಸಿ.ಹೊನ್ನಲಿಂಗಪ್ಪ, ಸಾದಿಕ್ ಪಾಷಾ, ಇಜಾಜ್ ಪಾಷಾ ಇನ್ನಿತರರು ಇದ್ದಾರೆ.   

ಮೂಡಿಗೆರೆ: ಮತದಾನ ಕುರಿತು ಜಾಗೃತಿ  ಮೂಡಿಸಿದರೆ ಉತ್ತಮ ಆಡಳಿತಕ್ಕೆ ಬುನಾದಿ ಕಲ್ಪಿಸಬಹುದು ಎಂದು ತಹಶೀಲ್ದಾರ್ ರುದ್ರಪ್ಪಾಜಿರಾವ್ ಅಭಿಪ್ರಾಯಪಟ್ಟರು.

ಪಟ್ಟಣದ ತತ್ಕೊಳ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಯುವ ಮತದಾರರಿಗಾಗಿ ಮಂಗಳವಾರ ಏರ್ಪಡಿಸಿದ್ದ ಮಾತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಸರ್ಕಾರದ ರಚನೆಯ ಶಕ್ತಿ ಮತದಾರರಿಗೆ ಇದೆ. ಜಾಗೃತ ಮತದಾನ ಮಾಡುವ ಮೂಲಕ ಉತ್ತಮ ಸರ್ಕಾರದ ನಿರ್ಮಾಣಕ್ಕೆ ಕಾರಣರಾಗಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮತದಾನದ ಬಗ್ಗೆ ಅರಿವಿನ ಕೊರತೆಯಿದ್ದು, ಜಾಗೃತರಾದ ಯುವ ಮತದಾರರು ಗ್ರಾಮೀಣ ಪ್ರದೇಶದ ಮತದಾರರಲ್ಲೂ ಜಾಗೃತಿ ಮೂಡಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ತೇಜೋಮೂರ್ತಿ ಮಾತನಾಡಿ, ದೇಶದಲ್ಲಿ ಮತದಾನದ ಶೇಕಡ ಪ್ರಮಾಣ ಕುಸಿದಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಮತದಾನದ ಮಹತ್ವ ಹೆಚ್ಚಾಗಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಾಗ ಮಾತ್ರ ಸಾಧ್ಯ.   ಕೆಲವೇ ವ್ಯಕ್ತಿಗಳ ಮತದಾನದಿಂದ ಉತ್ತಮ ಆಡಳಿತ ನಿರ್ಮಾಣಕ್ಕೆ ಕೊರತೆಯಾಗಬಹುದು. ಐದು ವರ್ಷಗಳಿಗೊಮ್ಮೆ ಲಭ್ಯವಾಗುವ ಮತದಾನದ ಅವಕಾಶದಿಂದ ಮತದಾರರು ವಂಚಿತವಾಗದ ರೀತಿಯಲ್ಲಿ ಜಾಗೃತಿ ಮಾಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಗಿರಿಜನ ಅಭಿವೃದ್ಧಿ ಇಲಾಖೆಯ ಜಿಲ್ಲಾಧಿಕಾರಿ ಸಿಂಗಾರಿಗೌಡ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ. ಉಷಾದೇವಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚೆನ್ನಬಸಪ್ಪ ಮೇಕಾಲಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಹರ್ಷಕುಮಾರ್, ಸಂಪನ್ಮೂಲ ವ್ಯಕ್ತಿ ಶಾಂತನಾಯ್ಕ ಮುಂತಾದವರಿದ್ದರು.

`ಮತದಾನ ಸ್ವಯಂಪ್ರೇರಿತವಾಗಲಿ'
ತರೀಕೆರೆ: ಪ್ರಜಾಪ್ರಭುತ್ವ ಬಲಗೊಳ್ಳಲು ಯುವಕರು  ಸ್ವಯಂ ಪ್ರೇರಿತರಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ಪರಮೇಶ್ವರಪ್ಪ ಕರೆ ನೀಡಿದರು.

ಪಟ್ಟಣದಲ್ಲಿ  ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಹಾಗೂ ಖಾಸಗಿ ಶಾಲೆ ಆಶ್ರಯದಲ್ಲಿ ಮಂಗಳವಾರ ನಡೆದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವ ಜನತೆ  ಇತ್ತೀಚಿನ ದಿನಗಳಲ್ಲಿ  ಮತದಾನ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವುದು ನಿಜಕ್ಕೂ ವಿಷಾದಕರ ಸಂಗತಿ. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಲೊಳ್ಳುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡುವಂತೆ ಅವರು ತಿಳಿಸಿದರು.

ಚುನಾವಣಾ ಆಯೋಗದ ಸೂಚನೆ ಹಿನ್ನಲೆಯಲ್ಲಿ ಮತದಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು  ಆಯಾಯಾ  ಶಾಲೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಮತಪಟ್ಟಿಯಲ್ಲಿ  ಹೆಸರು ಸೇರ್ಪಡೆ ಮತ್ತು ಮತದಾನ ಮಾಡುವ ಕುರಿತು ಅರಿವು  ಮೂಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ  ಎಂದು ತಿಳಿಸಿದರು.

ಅಭಿಯಾನದಲ್ಲಿ ಮುಖ್ಯೋಪಾಧ್ಯಾಯರಾದ  ಎಚ್.ಸಿ. ಹೊನ್ನಲಿಂಗಪ್ಪ, ಸಾದಿಕ್ ಪಾಷಾ, ಪರಮೇಶ್ವರಪ್ಪ, ಬಸವರಾಜಪ್ಪ , ಯನೈಟೆಡ್ ಶಾಲೆಯ ಇಜಾಜ್ ಷಾಷಾ ಇನ್ನಿತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.