ನರಸಿಂಹರಾಜಪುರ: ಇಲ್ಲಿನ ಸಿಂಹನಗದ್ದೆ ಬಸ್ತಿಮಠದಲ್ಲಿರುವ ಜ್ವಾಲಾಮಾಲಿನಿ ದೇವಿಯ ರಥೋತ್ಸವ ಗುರುವಾರ ಸಂಭ್ರಮದಿಂದ ನಡೆಯಿತು.
ರಥೋತ್ಸವದ ಅಂಗವಾಗಿ ನಿತ್ಯವಿಧಿ ಸಹಿತ ಮಹಾನೈವೇದ್ಯ ಪೂಜೆ, ಚಂದ್ರ ನಾಥಸ್ವಾಮಿಗೆ ಕಲಶಾಭಿಷೇಕ, ಜ್ವಾಲಾಮಾಲಿನಿ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಸಲಾಯಿತು. ಮಧ್ಯಾಹ್ನ 1ಗಂಟೆವೇಳೆಗೆ ರಥಾರೋಹ ಣಕ್ಕೆ ದೇವಿಯಿಂದ ಪ್ರಸಾದ ಬೇಡಿಕೆ ಸಲ್ಲಿಸಲಾ ಯಿತು.
ನಂತರ ಚಂದ್ರನಾಥಸ್ವಾಮಿ ಮತ್ತು ಜ್ವಾಲಾಮಾಲಿನಿ ದೇವಿಯ ಉತ್ಸವ ಮೂರ್ತಿಗಳನ್ನು ತಲೆಯ ಹೊತ್ತು ಚಂಡಮದ್ದಳೆಯೊಂದಿಗೆ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ರಥದ ಬಳಿ ತಂದು ಪೂಜೆ ನೆರವೇರಿಸಿ ಪ್ರತಿಷ್ಠಾಪಿಸಲಾಯಿತು.
ಭಕ್ತರು ನೂರಾರು ತೆಂಗಿನ ಕಾಯಿಗಳನ್ನು ರಥದ ಮುಂದೆ ಒಡೆದರು.ಸಿಂಹನಗದ್ದೆ ಬಸ್ತಿಮಠದ ಶ್ರೀಲಕ್ಷ್ಮೀ ಸೇನಭಟ್ಟಾರಕ ಸ್ವಾಮೀಜಿ ಮಧ್ಯಾಹ್ನ 1.30ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂ ಡಿದ್ದರು. ರಥೋತ್ಸವದ ಅಂಗವಾಗಿ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಪಟ್ಟಣದಲ್ಲಿ ಜ್ವಾಲಾಮಾಲಿನಿ ದೇವಿಯ ರಥದ ಮೆರವಣಿಗೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.