ADVERTISEMENT

ತರೀಕೆರೆ:ಆಸ್ಪತ್ರೆ, ಪುರಸಭೆ ಅವ್ಯವಸ್ಥೆಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 9:49 IST
Last Updated 18 ಜುಲೈ 2013, 9:49 IST
ಚಿಕ್ಕಮಗಳೂರು ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ  ಪ್ರಸನ್ನ ವಿ.ರಾಜ್ ಬುಧವಾರ ತರೀಕೆರೆ  ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಆಡಳಿತ ವೈದ್ಯ ಮಲ್ಲಿಕಾರ್ಜುನ ಇದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ.ರಾಜ್ ಬುಧವಾರ ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಆಡಳಿತ ವೈದ್ಯ ಮಲ್ಲಿಕಾರ್ಜುನ ಇದ್ದಾರೆ.   

ತರೀಕೆರೆ: ಚಿಕ್ಕಮಗಳೂರು ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ.ರಾಜ್ ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಿ ವಿಚಾರಣೆ ನಡೆಸಿದರು.

ನಂತರ ಅವರು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಅಲ್ಲಿನ ಸೌಕರ್ಯ  ಹಾಗೂ ವೈದ್ಯರ ಕಾರ್ಯವೈಖರಿ ಕುರಿತು  ಪರಿಶೀಲಿಸಿದರು. ಭೇಟಿ ನೀಡಿದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗೆ ಆಗಮಿಸಿದ್ದ ಮಹಿಳೆ ಯೊಬ್ಬರಿಗೆ ತುರ್ತು ಚಿಕಿತ್ಸೆ ನೀಡದೇ ಹೊರ ರೋಗಿಗಳ ತಪಾಸಣೆ ಮಾಡು ತ್ತಿದ್ದ ವೈದ್ಯರ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು ತಕ್ಷಣವೇ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಆಸ್ಪತ್ರೆಯ ಔಷಧಿ ಘಟಕ ಮತ್ತು ಲೆಕ್ಕಾಧಿಕಾರಿಗಳ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದಾಗ ವ್ಯತ್ಯಾಸ ಇರುವುದು ಕಂಡು ಬಂತು. ಅದನ್ನು ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.

ಆಸ್ಪತ್ರೆಯಲ್ಲಿ ಅನುಪಯುಕ್ತ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದ ಬಗ್ಗೆ ಬಂದ ದೂರಿಗೆ ಸ್ಪಂದಿ ಸಿದ ಲೋಕಾಯುಕ್ತರು, ವೈಜ್ಞಾನಿಕ ರೀತಿಯಲ್ಲಿ ಅವುಗಳನ್ನು ವಿಲೇವಾರಿ ಮಾಡಬೇಕು ಆಸ್ಪತ್ರೆ ಸುತ್ತಲೂ ಸ್ವಚ್ಛತೆ ಬಗ್ಗೆ ಗಮನ ಹರಿಸಲು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ಕಚೇರಿ ಕಟ್ಟಡದ ಅವ್ಯವಸ್ಥೆ ಮತ್ತು ಕಟ್ಟಡದ ಸುತ್ತಲೂ ಬೆಳೆದಿರುವ ಗಿಡಗಳನ್ನು ತೆಗೆಸದೇ ಇರುವ ಬಗ್ಗೆ ತೀವ್ರ ರೀತಿಯ ಅಸಮಧಾನ ವ್ಯಕ್ತಪಡಿಸಿದರು.

ಇನ್ನೆರಡು ದಿನಗಳಲ್ಲಿ ಅವುಗಳನ್ನು ತೆರವುಗೊಳಿಸಿ ಕಟ್ಟಡದ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಎಂಜಿನಿಯರ್ ಗಣೇಶ್‌ಗೆ ತಾಕೀತು ಮಾಡಿದರು.
ಪುರಸಭೆಯ ಆಶ್ರಯ ಯೋಜನೆ ಮತ್ತು ರಸ್ತೆ ಕಾಮಗಾರಿಗಳಲ್ಲಾಗಿರುವ ಅವ್ಯವಹಾರದ ಕುರಿತಂತೆ ವಿಚಾರಣೆ ನಡೆಸಿ ಇದಕ್ಕೆ ಸಂಬಂಧಿಸಿದ ಕಡತಗಳನ್ನು ಲೋಕಾಯುಕ್ತ ಕಚೇರಿಗೆ ರವಾನಿ ಸುವಂತೆ ಮುಖ್ಯಾಧಿಕಾರಿ ಟಿ.ಆರ್. ಪಲ್ಲವಿ ಅವರಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಕಟ್ಟಡದ ಅವ್ಯವಸ್ಥೆ ಕುರಿತಂತೆ ಪರಿಶೀಲಿಸಿ, ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿಗಳು , ರಾಜಸ್ವ ನಿರೀಕ್ಷಕರು ಮತ್ತು ಉಪ ತಹಶೀಲ್ದಾರ್‌ಗಳ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿದ್ದು, ಆ ಬಗ್ಗೆ  ಕ್ರಮ ವಹಿಸುವಂತೆ ಸೂಚಿಸಿದರು.

`ಪ್ರಜಾವಾಣಿ'ಯೊಂದಿಗೆ ಅವಕಾಶ ಇದ್ದಾಗ ಉತ್ತಮ ಕೆಲಸ ನಿರ್ವಹಿ ಸಬೇಕು, ನಮ್ಮ ನಂತರದಲ್ಲೂ ನಮ್ಮ ಕೆಲಸ ಮತ್ತು ಕಾರ್ಯ ವೈಖರಿ ನಮ್ಮನ್ನು ನೆನಪಿನಲ್ಲಿರುವಂತೆ ಆಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.