ADVERTISEMENT

ತಹಸೀಲ್ದಾರ್‌ಗೆ ಶಾಸಕ ವಿಶ್ವನಾಥ್ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 10:55 IST
Last Updated 2 ಫೆಬ್ರುವರಿ 2011, 10:55 IST

ಕಡೂರು: ಕಳೆದ ಆರು ವರ್ಷಗಳಿಂದ ಪುರಸಭೆಯಿಂದ ಆಶ್ರಯ ಮನೆಗಳಿಗೆ ನಿವೇಶನಗಳನ್ನು ನೀಡದೆ ಆಶ್ರಯ ಸಮಿತಿ ತಟಸ್ಥವಾಗಿದ್ದು ಸಮಿತಿ ಸಭೆ ನಡೆಸಿ ಕಂದಾಯ ಇಲಾಖೆಯಿಂದ ಆಶ್ರಯ ನಿವೇಶನಗಳನ್ನು ನೀಡಲು ಸುಮಾರು ಹತ್ತು ಎಕರೆ ಭೂಮಿಯನ್ನು ಗುರುತು ಮಾಡಲು ಶಾಸಕ ಡಾ.ವೈ.ಸಿ.ವಿಶ್ವನಾಥ್ ತಹಸೀಲ್ದಾರ್ ಅವರಿಗೆ ಸೂಚಿಸಿದರು.

ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಆಶ್ರಯ ಸಮಿತಿಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ವಾಜಪೇಯಿ ನಿವೇಶನ ಯೋಜನೆಯಡಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಪಟ್ಟಣಗೆರೆ ಗ್ರಾಮದ ಸರ್ವೆ ನಂ 60ರಲ್ಲಿ 9 ಎಕರೆ ಸರ್ಕಾರಿ ಭೂಮಿಯಿದ್ದು ಕಡೂರು ಪಟ್ಟಣದ ಮುದಿಯಪ್ಪ ಬಡಾವಣೆಯ ಸಮೀಪವಿರುವುದರಿಂದ ಈ ಪ್ರದೇಶವನ್ನು ಅಥವಾ ಎಮ್ಮೆದೊಡ್ಡಿ ರಸ್ತೆಯ ಹಂದೇನಳ್ಳಿ ಸಮೀಪ 14 ಎಕರೆ ಭೂಮಿಯನ್ನು ನೀಡಲು ತಹಸೀಲ್ದಾರ್ ರೂಪ ಅವರಿಗೆ ಶಾಸಕರು ತಿಳಿಸಿದರು.

ಹೀಗಾಗಲೇ 950 ವಸತಿ, 2160 ನಿವೇಶನಗಳಿಗೆ ಅರ್ಜಿಗಳು ಬಂದಿದ್ದು ಇದರಲ್ಲಿ ನಿಜವಾದ ಫಲಾನುಭವಿಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿ ಪಟ್ಟಿ ರಚಿಸಲು ಮುಖ್ಯಾಧಿಕಾರಿಗಳಿಗೆ ಆದೇಶಿಸಿದರು. ಅಕ್ರಮವಾಗಿ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸಿ ಹಕ್ಕು ಪತ್ರಗಳನ್ನು ನೀಡಲು ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಯಿತು.

ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಮುಂದಿನ ದಿನಗಳಲ್ಲಿ ಮೂರನೇ ಹಣಕಾಸು ಯೋಜನೆಯಡಿಯಲ್ಲಿ ಪಟ್ಟಣದ ಎಲ್ಲಾ ನಲ್ಲಿಗಳಿಗೆ ಮೀಟರ್ ಅಳವಡಿಸುವುದಾಗಿ ತಿಳಿಸಿದರು.ಪುರಸಭೆಯ ಅಧ್ಯಕ್ಷೆ ರುಕ್ಸಾನ ಫರ್ವೀನ್, ಉಪಾಧ್ಯಕ್ಷ ಮಂಜುನಾಥ್, ಕಂದಾಯ ಇಲಾಖೆಯ ಅಧಿಕಾರಿಗಳು, ಆಶ್ರಯ ಸಮಿತಿಯ ಸದಸ್ಯರಾದ ಗೋಪಿಕುಮಾರ್, ಮಹಮದ್ ಆದಮ್, ಲಲಿತಮ್ಮ ಪುರಸಭೆಯ ಅಧಿಕಾರಿ ಚಂದ್ರಶೇಖರ್, ಸದಸ್ಯ ಸೋಮೇಶ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.