ಕಡೂರು: ಮಹಿಳೆಯರು ಸಮಾಜದಲ್ಲಿ ತಮ್ಮ ಹಕ್ಕುಗಳನ್ನು ಚಲಾಯಿಸಲು ಸಾಮಾನ್ಯ ಕಾನೂನಿನ ತಿಳಿವಳಿಕೆ ಇಲ್ಲದೆ ಶೋಷಣೆಗೆ ಒಳಪಡುತ್ತಿದ್ದಾರೆ ಎಂದು ಸಿವಿಲ್ ನ್ಯಾಯಾಧೀಶ ಎಂ.ಎಸ್.ಆಳ್ವ ವಿಷಾದ ವ್ಯಕ್ತಪಡಿಸಿದರು.
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಇತ್ತೀಚೆಗೆ ವಿವಿಧ ಸ್ತ್ರೀ ಶಕ್ತಿ ಸಂಘಗಳಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿವಿಲ್ ಹಿರಿಯ ನ್ಯಾಯಾಧೀಶೆ ಶೋಭಾ ರಾಣಿ ಬಿ.ಹಿರೇಮಠ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಸ್ವತಂತ್ರವಾಗಿ ಬಾಳುವಿಕೆ, ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ, ಕಾನೂನು ಬಗ್ಗೆ ಅರಿವು ಮೂಡಿಸುವಿಕೆ ಯಾವುದೇ ಸಮಸ್ಯೆಗಳು ಉದ್ಭವಿಸಿದ್ದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ವಿವರಿದರು. ಅಂಗನವಾಡಿ,ಸ್ತ್ರೀ ಶಕ್ತಿ ಸಂಘದ ಮಹಿಳೆಯರು, ಕಾರ್ಯಕರ್ತೆಯರು ಮತ್ತು ದುಡಿಯುವ ಮಹಿಳೆಯರಿಗೆ ಮೊದಲು ಕಾನೂನಿನ ಅರಿವಿರಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಡಿಪಿಒ ಗುರುಸಿದ್ದಯ್ಯ ಮಾತನಾಡಿ, ಸರ್ಕಾರದಿಂದ ಆಯೋಜಿಸಿರುವ ಕಾರ್ಯಕ್ರಮಗಳು ಮತ್ತು ಕಾಯಕಲ್ಪದ ಪರಿಕಲ್ಪನೆಯ ಅರಿವನ್ನು ಮಹಿಳೆಯರಲ್ಲಿ ಮೂಡಿಸುವುದು ಅತ್ಯವಶ್ಯಕ. ಕಾನೂನಿನ ಸದುಪಯೋಗ ಪಡೆದು ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕು ಆಗ ಮಾತ್ರ ಮಹಿಳೆಯರು ಆರ್ಥಿಕವಾಗಿ,ಸಾಮಾಜಿಕವಾಗಿ, ಸ್ವಾವಲಂಬಿಗಳಾಗಿ ಹೊರಹೊಮ್ಮಲು ಸಾಧ್ಯ. ಸರ್ಕಾರದ ಯೋಜನೆಗಳು ಸಹ ಯಶಸ್ವಿಯಾಗುತ್ತವೆ ಎಂದರು.
ವಕೀಲರಾದ ಕೆ.ಎಸ್.ಬೊಮ್ಮಣ್ಣ, ಶ್ರೀನಿ ವಾಸ್ ಸೂರಿ,ಎಂ.ಕೆ.ಮಂಜುಳ, ಎನ್. ಶೇಖರ್ ಮಹಿಳೆಯರಿಗೆ ಕಾನೂನಿನ ಅರಿವು ಮೂಡಿಸುವ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.