ಹೊರನಾಡು (ಕಳಸ): ಹೊರನಾಡು ಗ್ರಾಮವನ್ನು ಬಲಿಗೆ ಗ್ರಾಮದೊಂದಿಗೆ ಸಂಪರ್ಕಿಸುವ 8 ಕಿ.ಮೀ ರಸ್ತೆ ಕಾಮಗಾರಿ ಕಳೆದ ವರ್ಷವಷ್ಟೇ ಮುಗಿದಿದೆ. ಆದರೆ ಇದೇ ರಸ್ತೆಯ ಆರಂಭದ 2 ಕಿ.ಮೀ ಕಾಮಗಾರಿ ಇದುವರೆಗೂ ನಡೆಯದೆ ಸಂಚಾರಕ್ಕೆ ತೊಡಕುಂಟಾಗಿದೆ.
ಹೊರನಾಡಿನಿಂದ ಸರ್ಕಾರಿ ಪ್ರೌಢಶಾಲೆ ಬಳಸಿ ಬಲಿಗೆ ರಸ್ತೆಯನ್ನು ಸಂಪರ್ಕಿಸುವ ರಸ್ತೆಗೆ ದಶಕದ ಹಿಂದೊಮ್ಮೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಭಾರಿ ಮಳೆಯಿಂದಾಗಿ ಆ ರಸ್ತೆಯೇ ಕೊಚ್ಚಿಹೋಗಿತ್ತು. ಅಂದಿನಿಂದ ಈ ರಸ್ತೆಗೆ ಅನುದಾನವೇ ಬಿಡುಗಡೆ ಆಗಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶ.
ಬಲಿಗೆ ರಸ್ತೆಯನ್ನು ರೂ. 1.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಲ್ಲಿಂದ ಮೆಣಸಿನಹಾಡ್ಯ ಮೂಲಕ ಹೊರನಾಡು-ಶೃಂಗೇರಿ ಕ್ಷೇತ್ರಗಳ ಸಂಪರ್ಕ ಇದೇ ರಸ್ತೆ ಮೂಲಕ ಸುಲಭ ಆಗುತ್ತದೆ. ಆದರೆ ಆರಂಭದ 2 ಕಿ.ಮೀ ರಸ್ತೆಯನ್ನು ಕಂಡರೆ ಈ ಮಾರ್ಗದಲ್ಲಿ ಯಾವುದೇ ಪ್ರವಾಸಿ ವಾಹನವೂ ಚಲಿಸುವ ಧೈರ್ಯ ಮಾಡುವುದಿಲ್ಲ.
ರಸ್ತೆ ವಿಸ್ತರಣೆ ಹಾಗೂ ಮರು ಡಾಂಬರೀಕರಣಕ್ಕೆ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರೂ ಅದಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆದ್ದರಿಂದ ರಸ್ತೆ ಅಭಿವೃದ್ಧಿ ಈಗ ಉಳಿದಿರುವುದು ಕೇವಲ ಪ್ರತಿಭಟನೆಯ ಹಾದಿ ಮಾತ್ರ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.