ADVERTISEMENT

ನಿವಾಸಿಗಳ ಪ್ರತಿಭಟನೆ; ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 5:40 IST
Last Updated 4 ಜನವರಿ 2012, 5:40 IST

ಕಡೂರು: ಕಡೂರು-ಬೀರೂರು ಪಟ್ಟಣ ನಡುವೆ ರೈಲ್ವೆ ಜೋಡಿ ಮಾರ್ಗ ಕಾಮ ಗಾರಿಗೆ ರೈಲ್ವೆ ಮಾರ್ಗದ  ಪಕ್ಕದದ ನಿವಾಸಿಗಳ ಮನೆ ತೆರವುಗೊಳಿಸಲು ಬಂದ ಪುರಸಭೆ ಮುಖ್ಯಾಧಿಕಾರಿ ಮತ್ತು ರೈಲ್ವೆ ಅಧಿಕಾರಿಗಳನ್ನು ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘದ ಸದಸ್ಯರು ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.  

ದಲಿತ ಕುಟುಂಬದ ಸದಸ್ಯರು ಯಾವುದೇ ಮನೆ ಕೆಡವದಂತೆ ತಡೆ ಒಡ್ಡಿದರು. ಕಡೂರು ಈದ್ಗಾನಗರ, ತ್ಯಾಗರಾಜ ನಗರ, ಸಿ.ಪಿ.ಸಿ ಕಾಲೊನಿ ಮತ್ತು ರೈಲ್ವೆ ಹಳಿಗಳ ಬದಿಯಲ್ಲಿ ಮನೆ ನಿರ್ಮಿಸಿಕೊಂಡ ವರನ್ನು ಒಕ್ಕಲೆಬ್ಬಿಸಲು ಮುಂದಾಗಿತ್ತು. ಆದರೆ ಇದನ್ನು ವಿರೋಧಿಸಿದ ನಿವಾಸಿಗಳು  ಬೇರೆ ಕಡೆ ಮನೆ ನಿರ್ಮಿಸಿ ಮಾಲೀಕತ್ವ ಸಿಂಧುಗೊಳಿಸಬೇಕು, ಇತರೆ ಸೌಲಭ್ಯ ಒದಗಿಸುವವರೆವಿಗೂ ಯಾವುದೇ ಕಾರಣಕ್ಕೂ ಮನೆ ತೆರವುಗೊಳಿಸಬಾರದು. ಒಂದು ವೇಳೆ ತೆರವು ಕಾರ್ಯಾಚರಣೆ ನಡೆಸಿದರೆ ಮುಂದಾಗುವ ಸಾಧಕ-ಬಾಧಕಗಳಿಗೆ ರೈಲ್ವೆ ಅಧಿಕಾರಿ ವರ್ಗ ಮತ್ತು ಪುರಸಭೆ ಹಾಗು ಕೇಂದ್ರ ಸರ್ಕಾರ ಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ತಾಲ್ಲೂಕು ಕೆಕೆಎನ್‌ಎಸ್‌ಎಸ್‌ನ ಅಧ್ಯಕ್ಷ ಕೆ.ವಿ.ವಾಸು ಎಚ್ಚರಿಸಿದರು. 

ಇಲ್ಲಿರುವ ಕುಟುಂಬಗಳಿಗೆ ಪುರಸಭೆ ಖಾತೆ ಇದೆ. ಕಂದಾಯ ನೀಡುತ್ತ ಬಂದಿದ್ದಾರೆ. ಆದರೂ ರೈಲ್ವೆ ಇಲಾಖೆಯು ಈಗ ಒಕ್ಕಲೆಬ್ಬಿಸಲು ಹುನ್ನಾರ ಮಾಡುತ್ತಿದ್ದು, ಪುರಸಭೆ ಆಡಳಿತ, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ತಹ ಸೀಲ್ದಾರ್ ಮೂಲಕ ಮನವಿ ಮಾಡಿದರು. 

ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟ ನೆಯ ಟಿ.ಮೂರ್ತಿ, ಆರ್.ಎಂ.ಬಸವರಾಜು ಹಾಗೂ ನೂರಾರು ಕುಟುಂಬಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿನಿಧಿಗಳ ಸಭೆ: ಮನೆ ತೆರವು ಸಂಬಂಧ ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಶಾಸಕ ವೈ.ಸಿ.ವಿಶ್ವನಾಥ್, ರೈಲ್ವೆ ಎಂಜಿನಿಯರ್ ಪುಷ್ಪರಾಜನ್ ತಹಶೀಲ್ದಾರ್ ಬಿ.ಆರ್.ರೂಪಾ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಪುರಸಭೆ ಅಧ್ಯಕ್ಷೆ ರುಕ್ಸಾನಾ ಪರ್ವೀನ್, ತಾ.ಪಂ. ಇಒ ಟಿ.ಎನ್.ಮೂರ್ತಿ ಮತ್ತು ಕೊಳೆಗೇರಿ ಸಂಘದ ಪದಾಧಿ ಕಾರಿಗಳು ಭಾಗವಹಿಸಿದ್ದರು. ಒಂದು ವಾರದವರೆಗೆ ಯಾವುದೇ ತೆರವು ಕಾರ್ಯಾಚರಣೆ ನಡೆಸದಂತೆ ಮತ್ತು ಅಧಿಕಾರಿಗಳ ಸಭೆ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.