ADVERTISEMENT

ಪರೀಕ್ಷಾರ್ಥ ಸಂಚಾರ ನಾಳೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 6:30 IST
Last Updated 23 ಫೆಬ್ರುವರಿ 2011, 6:30 IST

ಚಿಕ್ಕಮಗಳೂರು: ಕಡೂರಿನಿಂದ ಸಖರಾಯಪಟ್ಟಣದವರೆಗೆ ಇದೇ 24ರಂದು ಹಳಿಯ ಮೇಲೆ ರೈಲ್ವೆ ಇಂಜಿನ್ ಪರೀಕ್ಷಾರ್ಥ ಚಲಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಮೂರ್ತಿ ತಿಳಿಸಿದರು.ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡೂರು, ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಕುಂಠಿತಗೊಂಡಿರುವ ಕುರಿತು ಮೈಸೂರಿನಲ್ಲಿ ನಡೆದ ನಾಡರಕ್ಷಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಕೇಂದ್ರ ರೈಲ್ವೆ ರಾಜ್ಯ ಸಚಿವ ಮುನಿಯಪ್ಪ ಅವರ ಗಮನ ಸೆಳೆದಾಗ, ರೈಲು ಮಾರ್ಗವನ್ನು ಪರಿಶೀಲಿಸಲು ರೈಲ್ವೆ ಇಲಾಖೆ ಪ್ರಾಯೋಗಿಕವಾಗಿ ಕಡೂರಿನಿಂದ ಸಖರಾಯಪಟ್ಟಣದವರೆಗೆ ರೈಲ್ವೆ ಇಂಜಿನ್ ಚಲಿಸುವಂತೆ ಮಾಡಲು ಮುಂದಾಗಿದೆ ಎಂದು ತಿಳಿಸಿದರೆಂದರು.

ಅಭಿಯಾನ: ರಾಹುಲ್‌ಗಾಂಧಿಯವರಿಂದ ಪಕ್ಷಕ್ಕೆ ಯುವಜನರನ್ನು ಹೆಚ್ಚಾಗಿ ಸೇರಿಸಿಕೊಂಡು ಅವರಿಗೆ ಅಧಿಕಾರ ನೀಡುವ ಕುರಿತು ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನವನ್ನು ಪಕ್ಷ ಬೆಂಬಲಿಸಲಿದೆ ಎಂದು ಹೇಳಿದರು.ಬೀರೂರಿನಲ್ಲಿ ಇದೇ 26ರಂದು ಯುವಕಾಂಗ್ರೆಸ್ ಸದಸ್ಯತ್ವ ನೋಂದಣಿ ಆರಂಭವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ಕೇಂದ್ರಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗುವುದು ಸಾಧ್ಯವಾದರೆ. ಕೇಂದ್ರಕ್ಕೆ ನಿಯೋಗ ತೆರಳಲಾಗುವುದೆಂದು ತಿಳಿಸಿದರು.

ಅಡಿಕೆಗೆ ಪೂರಕ ಮಾರುಕಟ್ಟೆ ದೊರೆಕಿಸಿಕೊಡಬೇಕು. ವೈಜ್ಞಾನಿಕ ಬೆಲೆಯನ್ನು ನೀಡುವಂತೆ ನಿಯೋಗವು ಪ್ರಧಾನಮಂತ್ರಿಗಳನ್ನು ಒತ್ತಾಯಿಸಲಿದೆ ಎಂದು ಹೇಳಿದರು.ಅಡಿಕೆ ಬೆಳೆಗಾರರ ಸಮಸ್ಯೆಗೆ ನಿಯೋಗ ತೆರಳಲು ಹಾಗೂ ಯುವಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಜಿಲ್ಲಾ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದನ್ನು ಯುವಕಾಂಗ್ರೆಸ್ ಅಧ್ಯಕ್ಷ ಸಚ್ಚಿನ್ ಮೀಗಾ ಸ್ವಾಗತಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.