ADVERTISEMENT

ಬೀರೂರು: ಸಂತೆಯ ದಿನವೂ ಬಿಕೊ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 8:25 IST
Last Updated 7 ಅಕ್ಟೋಬರ್ 2012, 8:25 IST

ಬೀರೂರು:  ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ ಪಟ್ಟಣದಲ್ಲಿ ಬಹುತೇಕ  ಯಶಸ್ವಿಯಾಯಿತು.

ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡಸೇನೆ, ಸಾಮಾಜಿಕ ಸೇವಾ ಕಾರ್ಯಕರ್ತರ ಸಂಘ, ಜಯ ಕರ್ನಾಟಕ ಸಂಘಟನೆ  ಮತ್ತು ಕನ್ನಡ ಸಾಹಿತ್ಯ ಪರಿಷತ್ ಬೀರೂರು ಹೋಬಳಿ ಘಟಕದ ಸದಸ್ಯರು ಬಂದ್‌ನಲ್ಲಿ ಪಾಲ್ಗೊಂಡರು.

ಸಂತೆಯ ದಿನ ಸಂತೆಮೈದಾನ ಭಣ ಗುಡುತ್ತಿತ್ತು. ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಸಂಚರಿಸದ ಕಾರಣ ಬಸ್‌ನಿಲ್ದಾಣಗಳು ಬಿಕೋ ಎನ್ನುತ್ತಿದ್ದರೆ, ತರಕಾರಿ ಬೆಳೆದ ಹಲವರು ರೈತರು ಹಳ್ಳಿಗಳಿಂದ ಆಟೊಗಳ ಮುಖಾಂತರ ಹೆಚ್ಚು ಬಾಡಿಗೆ ನೀಡಿ ಸಂತೆಗೆ ಮಾರಾಟ ಮಾಡಲು ತರಕಾರಿಗಳನ್ನು ತಂದರೂ ಸಂಘಟನೆಗಳ ಕಾರ್ಯಕರ್ತರು ಮಾರಾಟ ನಡೆಸದಂತೆ ನಿರ್ಬಂಧ ಹೇರಿದ್ದರು. ಹಳ್ಳಿಗಳಿಂದ ಬಂದ ಹಲವು ತರಕಾರಿ ಮತ್ತು ದಿನಸಿ ಮಾರಾಟಗಾರರು ವ್ಯಾಪಾರ ನಡೆಸಲೂ ಆಗದೆ ವಾಪಸ್ ಹೋಗಲೂ ಆಗದೆ ಪರದಾಡುತ್ತಿದ್ದರು.

ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರ, ಪ್ರಧಾನಿ ಮತ್ತು ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆಗಳನ್ನು ಕೂಗಿ ಮಹಾತ್ಮ ಗಾಂಧಿವೃತ್ತದಲ್ಲಿ ಪ್ರತಿಕೃತಿ ದಹಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರಾದ ಷಣ್ಮು ಖಪ್ಪ, ಉಮೇಶ್,ಹೇಮಂತ್,ಟಿ.ಎನ್.ಸುಬ್ರಮಣಿ , ಶಿವಲಿಂಗಪ್ಪ, ಆರೀಫ್, ಮಧುಬಾವಿಮನೆ, ಅಶೋಕ್, ವೀರಭದ್ರ, ಮಂಜುನಾಥ್ ಮುಂತಾ ದವರು ಪಾಲ್ಗೊಂಡರು. ಪೊಲೀಸರು ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಭದ್ರತೆ ಒದಗಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.