ADVERTISEMENT

`ಮತದಾರರ ಪಟ್ಟಿಯಲ್ಲಿ ಗೊಂದಲ'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 6:54 IST
Last Updated 27 ಡಿಸೆಂಬರ್ 2012, 6:54 IST

ಬೀರೂರು: ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನಸಭೆ ಚುನಾವಣೆ ಘೋಷಣೆಯಾಗಲಿದ್ದು,  ಚುನಾವಣಾ ಆಯೋಗ ಮತದಾರರಪಟ್ಟಿಯ ಗೊಂದಲ ಮತ್ತು ದೋಷಗಳನ್ನು ಪರಿಹರಿಸಲು ಈವರೆಗೆ ಸಾಧ್ಯವಾಗಿಲ್ಲ ಎಂದು ಬೀರೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ದೂರಿದ್ದಾರೆ.

ರಾಜ್ಯಸರ್ಕಾರ ಹೊರಡಿಸಿದ ಪ್ರಕಟಣೆಯ ಅನ್ವಯ ಬರುವ ಫೆಬ್ರುವರಿ ತಿಂಗಳಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯಬೇಕಿತ್ತು. ಈ ಸಲುವಾಗಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಪರಿಶೀಲನೆಗಾಗಿ ನೀಡಿದ್ದ 2012ರ ಜನವರಿಯಲ್ಲಿ ರೂಪಿಸಲಾದ ಮತದಾರರ ಪಟ್ಟಿ ತಪ್ಪುಗಳಿಂದ ಕೂಡಿದೆ. ತಪ್ಪುಗಳನ್ನು ಗುರುತಿಸಿ ತಿದ್ದುಪಡಿಗೆ ಸಲಹೆ ನೀಡಬೇಕಿದ್ದ ಜನಪ್ರತಿನಿಧಿಗಳು ಕೂಡಾ ಈ ಬಗ್ಗೆ ಗಮನಹರಿಸದೆ  ಕಾಲಹರಣ ಮಾಡಿದ್ದರಿಂದ ತಪ್ಪುಗಳು ಹಾಗೇ ಉಳಿದಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ವಿನಾಯಕ ಮತ್ತು ಪ್ರಧಾ ಕಾರ್ಯದರ್ಶಿ ಎಂ.ಐ.ಬಸವರಾಜ್ ದೂರಿದ್ದಾರೆ.

ಪಟ್ಟಿಯಲ್ಲಿ ಬದುಕಿರುವವರ ಹೆಸರನ್ನು ತೆಗೆದುಹಾಕಿ ಸತ್ತವರ ಹೆಸರನ್ನು ಉಳಿಸಿಕೊಳ್ಳಲಾಗಿದೆ. ಪಟ್ಟಿಯ ಪ್ರಮುಖ ದೋಷವೆಂದರೆ ಯಾರದೋ ಹೆಸರಿಗೆ ಯಾರದೋ ಭಾವಚಿತ್ರ ಪ್ರಕಟಿಸಲಾಗಿದೆ. ದೇವರಾಜ ಇಲ್ಲಿ ಜಯಮ್ಮನಾದರೆ, ನಂಜುಂಡಪ್ಪನ ಹೆಸರು ಗೀತಾ ಎಂದಾಗಿದೆ. ವೀರಭದ್ರಪ್ಪ ಅವರ ಹೆಸರು ಹರಿಜನ ನಾಗಮ್ಮ, ರಾಮಚಂದ್ರ ಹೋಗಿ ಕುಮುದಾ ಗೌಡ ಆಗಿದ್ದಾರೆ.

ಮಲ್ಲೇಶರಾವ್ ಅಲ್ಲಿಸಾಬ್ ಆದರೆ ದಾಕ್ಷಾಯಿಣಿ ವೆಂಕಟೇಶಪ್ಪ ಆಗಿದ್ದು, ಪುರುಷರ ಭಾವಚಿತ್ರಕ್ಕೆ ಮಹಿಳೆಯರ ಹೆಸರು ಸೇರ್ಪಡೆ    ರೀತಿ ಪಟ್ಟಣದ ಚಿತ್ರಣವನ್ನೇ ಬದಲಿಸುವ, ಸಂಬಂಧವೇ ಇಲ್ಲದ ವಾರ್ಡ್‌ಗೆ ಮತದಾರನ ಹೆಸರು ಸೇರ್ಪಡೆ ಮಾಡುವ ತಪ್ಪುಗಳು ನಡೆದಿವೆ.

ಈ ರೀತಿ ಹಲವಾರು ತಪ್ಪುಗಳಿಂದ ಕೂಡಿರುವ ಮತದಾರರ ಪಟ್ಟಿಯನ್ನು ಸೂಕ್ತವಾಗಿ ಪರಿಷ್ಕರಿಸಿ ಮತದಾರರ ಹಕ್ಕನ್ನು ಬಲವಂತವಾಗಿ ಕಸಿದುಕೊಳ್ಳುವ ಪ್ರಮಾದವನ್ನು ಚುನಾವಣಾ ಆಯೋಗ ತಪ್ಪಿಸಲಿ. ಲೋಪದೋಷಗಳನ್ನು ಸರಿಪಡಿಸುವ ಸಲುವಾಗಿ ತಹಶೀಲ್ದಾರ್ ಕಚೇರಿಗೆ ದೂರು ಸಲ್ಲಿಸಿದ್ದು, ಅಧಿಕಾರಿಗಳು ಶೀಘ್ರ ಕ್ರಮ ವಹಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.