ಕೊಪ್ಪ: ಪಟ್ಟಣ ಹಾಗೂ ಸುತ್ತಮುತ್ತ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಾಳಗಡಿಯ ತಾಲ್ಲೂಕು ಕಚೇರಿ ಎದುರಿನ ಗುಡ್ಡದ ಮಣ್ಣು ಕುಸಿದು ಕೆಳ ಭಾಗದ ಮನೆಗಳಿಗೆ ತೀವ್ರ ಹಾನಿಯಾಗಿದೆ.
‘ಬಾಳಗಡಿ ಗುಡ್ಡದ ಮೇಲೆ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡದ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಬೆಂಗಳೂರಿನ ರೈಟ್ಸ್ ಸಂಸ್ಥೆಯವರ ಬೇಜವಾಬ್ದಾರಿಯಿಂದ ಈ ಅವಘಡ ನಡೆದಿದೆ. ಗುಡ್ಡ ಸಮತಟ್ಟುಗೊಳಿಸಲು ಜೆಸಿಬಿಯಿಂದ ಅಗೆದ ಮಣ್ಣನ್ನು ತೆರವುಗೊಳಿಸದ ಕಾರಣ ಸತತವಾಗಿ ಸುರಿದ ಮಳೆ ನೀರು ಮಣ್ಣನ್ನು ಕೊಚ್ಚಿಕೊಂಡು ಗುಡ್ಡದ ಕೆಳಭಾಗದಲ್ಲಿರುವ ಬೆನ್ನಿ ಜೋಸೆಫ್, ಅಬ್ದುಲ್ ರಜಾಕ್, ಶಿವಮ್ಮ, ಆರಿಫ್ ಮತ್ತಿತರರ ಮನೆಯಂಗಳಕ್ಕೆ ಹರಿದು ಮನೆಯೊಳಗೂ ನುಗ್ಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ರೈಟ್ಸ್ ಸಂಸ್ಥೆಯ ಎಂಜಿನಿಯರ್ ಅನೀಷ್ ಅವರಲ್ಲಿ ಪ್ರಶ್ನಿಸಿದರೆ,‘ಮಣ್ಣು ಕುಸಿದಿರುವ ಬಗ್ಗೆ ಸ್ಥಳ ಪರಿಶೀಲನೆ ಮಾಡಿ, ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂಬ ಭರವಸೆ ನೀಡಿದ್ದಾರೆ. ಮಲೆನಾಡು ಪ್ರದೇಶವಾಗಿರುವ ಇಲ್ಲಿ ಮಳೆ ಪ್ರಾರಂಭವಾದರೆ ನಿರಂತರ ಸುರಿಯುತ್ತಿರುತ್ತದೆ. ಅದಕ್ಕಿಂತ ಮೊದಲು ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಕೆಳಭಾಗದ ಪ್ರದೇಶದಲ್ಲಿ ವಾಸಿಸುವ 6-7 ಮನೆಗಳಿಗೆ ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆಗಳಿವೆ. ಆದ್ದರಿಂದ ಗುಡ್ಡದ ಮಣ್ಣನ್ನು ಕೂಡಲೇ ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.