ADVERTISEMENT

ಮಹಿಳೆಯರ ರಾಜಕೀಯ ಶಕ್ತಿ ಹೆಚ್ಚಲಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಆಲ್ದೂರು (ಮೂಡಿಗೆರೆ): ಮಹಿಳೆಯರು ಸಂಘಟನೆಯ ಮೂಲಕ ರಾಜಕೀಯವಾಗಿ ಪ್ರಬಲರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಹೇಳಿದರು.

ಹೋಬಳಿಯ ಹೆಡದಾಳ್ ಗ್ರಾಮದ  ವಿನಾಯಕ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಯಶಸ್ವಿನಿ ಜ್ಞಾನ ವಿಕಾಸ ಕೇಂದ್ರದ ಸ್ವಸಹಾಯ ಸಂಘಗಳ ವಾರ್ಷಿಕೋತ್ಸವವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಸ್ತ್ರೀಯರು ಆರ್ಥಿಕವಾಗಿ ಸಬಲರಾಗಲು ಸಂಘಟನೆ ಅವಶ್ಯಕ. ಸ್ವಸಹಾಯ ಸಂಘದಿಂದಾಗಿ ಇಂದಿನ ಸಮಾಜದ ಸ್ತ್ರೀಯ ಚಿತ್ರಣ ಬದಲಾಗಿದ್ದು, ಅಡುಗೆ ಮನೆಗೆ ಸೀಮಿತವಾಗಿದ್ದ ಸ್ತ್ರೀ ಸಮಾಜದ ಮುಖ್ಯವಾಹಿನಿಗೆ ಬರಲು ಸಹಾಯವಾಗಿದೆ.  ಗ್ರಾಮೀಣ ಸಮಾಜದಲ್ಲಿ ಜೀವನ ಮಟ್ಟ ಸುಧಾರಣೆಯಾಗಲು ಸ್ತ್ರೀಯು ಸಹಾಯಕವಾಗಿದ್ದಾಳೆ. ಮಹಿಳೆಯು ಸಂಘಟನೆಯ ಮೂಲಕ ರಾಜಕೀಯದಲ್ಲಿ ನೀಡಲಾಗಿರುವ ಪ್ರಾಶಸ್ತ್ಯವನ್ನು ಬಳಸಿಕೊಂಡು ರಾಜಕೀಯವಾಗಿ ಇನ್ನಷ್ಟು ಪ್ರಬಲರಾಗಬೇಕು ಎಂದರು.

ರಾಜ್ಯಸಭೆಯ ಮಾಜಿ ಸದಸ್ಯೆ ಬಿಂಬಾ ರಾಯ್ಕರ್ ಮಾತನಾಡಿದರು.

ಸಮಾರಂಭದಲ್ಲಿ ಹೆಡದಾಳ್, ಕೋಟೆಯೂರು, ಹುಣಸೆಮಕ್ಕಿ, ಕಲ್ಲುಗುಡ್ಡೆ, ಮಾವಿನಗುಣಿ, ಕಟ್ರುಮನೆ, ಮಾರಿಗುಡಿ ಗ್ರಾಮಗಳ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿ, ಹಲವಾರು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಅನಂತ್, ಕೃಷಿ ಅಧಿಕಾರಿ ಚಿದಾನಂದ, ಗ್ರಾ.ಪಂ. ಸದಸ್ಯೆ ಪಾರ್ವತಿ, ಮಂಜುನಾಥ್, ಪ್ರಸಾದ್, ಕವಿತಾ, ಪುಟ್ಟಸ್ವಾಮಿ, ಧರ್ಮೆಶ್, ಕುಮಾರ್ ಮುಂತಾದವರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.