ADVERTISEMENT

ಮುಖ್ಯಾಧಿಕಾರಿ ವಿರುದ್ಧ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:10 IST
Last Updated 20 ಜನವರಿ 2011, 9:10 IST

ಕಡೂರು: ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದರೂ ಮುಖ್ಯಾಧಿಕಾರಿ ಅದನ್ನು ಜಾರಿಗೊಳಿಸದೆ ರಾಜಕೀಯ ಮುಖಂಡರ ಹಿಂಬಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪುರಸಭೆ ಸದಸ್ಯರು ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆಯ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ರುಕ್ಸಾನ ಫರ್ವೀನ್ ಅವರ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅನೇಕ ಸದಸ್ಯರು ಮುಖ್ಯಾಧಿಕಾರಿ ವಿರುದ್ಧ ಆರೋಪ ಮಾಡಿದರು.

ಖಾಸಗಿ ಬಿಲ್ಡರ್ ಉಪೇಂದ್ರ ಅವರು ಮರವಂಜಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಬಡಾವಣೆಯಲ್ಲಿ 18 ಗುಂಟೆ ಮತ್ತು ಸಿದ್ದರಾಮೇಶ್ವರ ಬಸ್ ಗ್ಯಾರೇಜ್‌ನ ಸಮೀಪದ ರಸ್ತೆ ಹಾಗೂ ಪಾರ್ಕ್ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ, ಮುಖ್ಯಾಧಿಕಾರಿ ವಿಳಂಬ ಮಾಡುತ್ತಿರುವುದನ್ನು ಸದಸ್ಯ ಆನಂದ್ ಸಭೆಯ ಗಮನಕ್ಕೆ ತಂದರು. ಸದಸ್ಯರ ಆರೋಪಕ್ಕೆ ಮುಖ್ಯಾಧಿಕಾರಿ ಉತ್ತರಿಸದಿರುವುದನ್ನು ಕಂಡು ಸಭೆಯಲ್ಲಿ ಗದ್ದಲದ ವಾತಾವರಣ ಮೂಡಿತು. ನಂತರ ಶಾಸಕ ವಿಶ್ವನಾಥ್ ಮಧ್ಯ ಪ್ರವೇಶಿಸಿ ಜಿಲ್ಲಾಧಿಕಾರಿ ಆದೇಶದಂತೆ ಒತ್ತುವರಿ ತೆರವುಗೊಳಿಸಲು ಮುಖ್ಯಾಧಿಕಾರಿಗೆ ತಿಳಿಸಿದರು.

ಸದಸ್ಯರಾದ ಈರಳ್ಳಿ ರಮೇಶ್,ರಂಗನಾಥ್, ಭಂಡಾರಿ ಶ್ರೀನಿವಾಸ್ ಮತ್ತು ಲಕ್ಕಣ್ಣ ಕೆಲವು ನಿರ್ಣಯಗಳ ಬಗ್ಗೆ ಮಾತಿನ ಚಕಮಕಿ ನಡೆಸಿದರು. ಸದಸ್ಯರ ನಡುವಿನ ಈ ಗೊಂದಲಕ್ಕೆ ಮುಖ್ಯಾಧಿಕಾರಿಯೇ ನೇರ ಹೊಣೆಯಾಗಿದ್ದಾರೆ ಎಂದು ಸಭೆಯಲ್ಲಿ ಒಕ್ಕೊರಲಿನಿಂದ ಆರೋಪಿಸಲಾಯಿತು.

ಪಟ್ಟಣದ ಒಳ ಭಾಗದಲ್ಲಿ ಕೋಳಿ ಅಂಗಡಿಗಳನ್ನು ಮುಚ್ಚಿಸಿ ಪುರಸಭೆಯಿಂದ ನೀಡಿರುವ ಹಳೆ ಸಂತೆ ಮೈದಾನದ ಮಳಿಗೆಗಳಿಗೆ ವರ್ಗಾಯಿಸಲು ಎಲ್ಲ ಸದಸ್ಯರು ಪಕ್ಷಭೇದ ಮರೆತು ಸಭೆಯಲ್ಲಿ ಅಂಗೀಕಾರ ಕೈಗೊಂಡರು. ಇದಕ್ಕೆ ಶಾಸಕರು ಅನುಮೋದಿಸಿ ಪಟ್ಟಣದ ಒಳ ಭಾಗದಲ್ಲಿರುವ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಲು ಆದೇಶಿದರು. ವಾಜಪೇಯಿ ಮನೆ ನಿರ್ಮಾಣಕ್ಕೆ ಬಂದಿರುವ ಅರ್ಜಿಗಳನ್ನು ಆದಷ್ಟು ಬೇಗ ಅಂತಿಮಗೊಳಿಸಿ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ಕಲ್ಪಿಸಲು ನಿರ್ಣಯ ಮಾಡಲಾಯಿತು.

ಶಾಸಕ ಡಾ.ವೈ.ಸಿ.ವಿಶ್ವನಾಥ್ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ ರೂ.5 ಕೋಟಿ ವಿಶೇಷ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಸದಸ್ಯರಾದ ಸೋಮಣ್ಣ, ಕೆ.ವಿ.ವಾಸು, ಸೋಮೇಶ್, ಕೃಷ್ಣಕುಮಾರ್,ಬಷೀರ್ ಸಾಬ್,ಕೆ.ಜಿ.ಲೋಕೇಶ್, ಸುರೇಶ್ ಮತ್ತು ಲೋಕೇಶ್ ಪ್ರಶ್ನೋತ್ತರದಲ್ಲಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.