ADVERTISEMENT

ಮುಸಲಧಾರೆ: ರಸ್ತೆ ಶಿಥಿಲ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 6:04 IST
Last Updated 6 ಜುಲೈ 2013, 6:04 IST

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಬುಧವಾರ ಭಾರಿ ಪ್ರಮಾಣದಲ್ಲಿ ಸುರಿದಿದ್ದ ಆರಿದ್ರಾ ಮಳೆ ಗುರುವಾರ ಬೆಳಿಗ್ಗೆಯಿಂದಲೇ ಕ್ಷೀಣಿಸಿತ್ತು. ಬುಧವಾರ ದಿಂದ ಗುರುವಾರ ಬೆಳಿಗ್ಗೆಯವರೆಗೆ 98.6 ಮಿ.ಮೀ ಮಳೆಯಾಗಿದೆ.

ಬುಧವಾರ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದಿಂದ ನೇರಲೆಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಬಳಿ ಮಣ್ಣು ಕುಸಿದಿದ್ದು ನೀರು ನುಗ್ಗಿದ ರಭಸಕ್ಕೆ ಹೊಸದಾಗಿ ನಿರ್ಮಿಸಿದ್ದ ರಸ್ತೆ ಸಂಪೂರ್ಣ ಶಿಥಿಲಗೊಂಡಿದೆ.

ಬುಧವಾರ ಸೇತುವೆಯ ಮೇಲೆ ಸುಮಾರು 5 ಅಡಿಗೂ ಹೆಚ್ಚಿನ ನೀರು ಉಕ್ಕಿಹರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಗುರುವಾರವೂ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತಿತ್ತು. ಶೆಟ್ಟಿಕೊಪ್ಪ ಗ್ರಾಮದ ಕೆರೆಯೂ ಸಹ ತುಂಬಿ ಹರಿದಿದೆ.

ಶೆಟ್ಟಿಕೊಪ್ಪದ ಭದ್ರಾ ಕಾಲೋನಿಗೆ ಸಂಪರ್ಕಕಲ್ಪಿಸುವ ಕಾಲುವೆ ಸೇತುವೆ ಕುಸಿಯುವ ಹಂತ ತಲುಪಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗುರುವಾರ ಮಳೆ ಬಿಡುವು ನೀಡಿದ್ದರಿಂದ ಬತ್ತದ ಬೆಳೆಗಾರರು ಸಸಿ ಹಾಕುವ, ಗದ್ದೆ ಬದು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.