ಮೂಡಿಗೆರೆ: ತಾಲ್ಲೂಕಿನ ಕುಂದೂರು, ಸಾರಗೋಡು, ತಳವಾರ ಗ್ರಾಮಗಳಲ್ಲಿ 1ವಾರದಿಂದ ಕಾಡಾನೆಗಳು ದಾಳಿ ನಡೆಸುತ್ತಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ.
ಎಂಟು ಕಾಡಾನೆಗಳಿರುವ ಗುಂಪು ರಾತ್ರಿ ವೇಳೆ ದಾಳಿ ನಡೆಸಿದ್ದು, ಹಲವಾರು ರೈತರ ಹತ್ತಾರು ಎಕರೆಯಲ್ಲಿ ಬೆಳೆದಿರುವ ಕಾಫಿ, ಅಡಿಕೆ, ಭತ್ತ, ಏಲಕ್ಕಿ ಬೆಳೆಗಳನ್ನು ತುಳಿದು, ರೈತರು ಕಂಗಾಲಾಗುವಂತೆ ಮಾಡಿವೆ.
ಸಾರಗೋಡು ಮೀಸಲು ಅರಣ್ಯದ ಕಡೆಯಿಂದ ಬಂದಿರುವ ಕಾಡಾನೆಗಳು, ತಳವಾರದ ರೈತ ಸಂಜೀವ್ಕುಮಾರ್ ಎಂಬವವರ ಕಾಫಿ ಮತ್ತು ಅಡಿಕೆ ತೋಟಕ್ಕೆ ನುಗ್ಗಿ 12 ವರ್ಷ ಹಳೆಯ ಅಡಿಕೆ ಗಿಡಗಳನ್ನು ನೆಲಕ್ಕುರುಳಿಸಿವೆ.
ಕುಂದೂರಿನ ರಾಮೇಗೌಡ ಎಂಬವವರ ಐದು ಎಕರೆ ಭತ್ತದ ಗದ್ದೆಗೆ ಇಳಿದಿರುವ ಆನೆಗಳ ಹಿಂಡು, ತೆನೆ ಹೊಡೆಯುತ್ತಿದ್ದ ಭತ್ತದ ಪೈರನ್ನು ಕಿತ್ತು ತಿಂದು, ತುಳಿದು ಹಾಕಿ ಸಂಪೂರ್ಣ ನೆಲಸಮ ಮಾಡಿವೆ. ದರ್ಶನ ಗ್ರಾಮಕ್ಕೆ ಬಂದಿರುವ ಆನೆಗಳು ಗಿರೀಶ್ ಎಂಬವರ ಕಾಫಿ ತೋಟದ ಮೂಲಕ ತೆರಳಿದ್ದು, ಒಂದು ಎಕರೆಯಷ್ಟು ಪ್ರಮಾಣದ ಕಾಫಿ ತೋಟದ ಫಸಲು ಹಾನಿಮಾಡಿವೆ.
ಆನೆ ಹಾವಳಿ ತಡೆಗೆ ಅರಣ್ಯ ಇಲಾಖೆಯವರು ಐಬಿಎಕ್ಸ್ ಸೋಲಾರ್ ಬೇಲಿ ಅಳವಡಿಸಿದ್ದರೂ, ಆನೆಗಳು ಅವುಗಳನ್ನು ತುಂಡರಿಸಿ ದಾಳಿ ನಡೆಸಿವೆ. ಕಳೆದ ವರ್ಷ ಮೂರು ಆನೆಗಳ ತಂಡ ದಾಳಿ ನಡೆಸಿ ಬೆಳೆ ಹಾನಿಗೊಳಿಸ್ದ್ದಿದವು. ಆದರೆ ಈ ಬಾರಿ ಎಂಟು ಆನೆಗಳ ಹಿಂಡು ಕಾಣಿಸಿಕೊಂಡಿರುವುದು ಸ್ಥಳಿಯರಲ್ಲಿ ಆತಂಕ ಹೆಚ್ಚಿಸಿದೆ. ಕಾಡಾನೆಗಳ ಹಾವಳಿಯಿಂದಾಗಿ, ತೋಟಗಳಿಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆ.
ಇದರಿಂದಾಗಿ ಹಣ್ಣಾಗಿರುವ ಅರೇಬಿಕಾ ಕಾಫಿ ಕೊಯ್ಯಲು ರೈತರು ಚಿಂತಾಕ್ರಾಂತರಾಗಿದ್ದಾರೆ. ಅರಣ್ಯ ಇಲಾಖೆಯು, ಆನೆಗಳು ದಾಳಿ ನಡೆಸಿರುವ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ಕಾರ್ಯ ನಡೆಸುತ್ತಿದೆ. ಪ್ರತಿ ವರ್ಷವೂ ಕಾಡಾನೆಗಳು ದಾಳಿ ನಡೆಸಿ ರೈತರ ಬೆಳೆ ಹಾನಿಗೊಳಿಸುತ್ತಿದ್ದು, ಆನೆಗಳನ್ನು ಓಡಿಸುವುದಕ್ಕಿಂತಲೂ ಅವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂಬುದು ಸ್ಥಳಿಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.