ADVERTISEMENT

ವೀರಭದ್ರಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 9:50 IST
Last Updated 21 ಜೂನ್ 2011, 9:50 IST

ಕಡೂರು: ಪಟ್ಟಣದ ಛತ್ರದ ಬೀದಿಯಲ್ಲಿರುವ ವೀರಭದ್ರಸ್ವಾಮಿ ರಥೋತ್ಸವ ಭಕ್ತರ  ಹರ್ಷೋದ್ಗಾರದ ನಡುವೆ ಸೋಮವಾರ ನಡೆಯಿತು.

ವೀರಭದ್ರಸ್ವಾಮಿಯನ್ನು ಸನ್ನಿಧಿಯಿಂದ ಕರೆತರಲಾಯಿತು. ಕೆಂಚಾಂಬ, ಭೈರೇದೇವರು, ಬನಶಂಕರಿ, ಸ್ವರ್ಣಾಂಭ, ಚೌಡ್ಲಾಪುರದಮ್ಮ ದೇವರನ್ನು ಹೊತ್ತ ಭಕ್ತರು  ಪಟ್ಟಣದಲಿ ಮೆರವಣಿಗೆ ನಡೆಸಿದರು. ಈ ಸಮಯ ಕೋಲಾಟ, ವೀರಗಾಸೆ, ಕೀಲುಕುದುರೆ, ಚೋಮನಕುಣಿತ, ಡೊಳ್ಳುಕುಣಿತ, ಬಾಣ, ಬಿರುಸು ಮುಂತಾದ ಆಕರ್ಷಕ ಮದ್ದುಗುಂಡುಗಳ ಶಬ್ದದ ನಡುವೆ ಭಕ್ತರು ರಥ ಎಳೆದರು.

ಹರಕೆ ಹೊತ್ತ ಮಹಿಳೆಯರು,ಮಕ್ಕಳು ರಥದ ಮುಂದೆ ಉರುಳು ಸೇವೆ ನಡೆಸಿದರು. ಕೆಲವು ಭಕ್ತರು ಬಾಳೆಹಣ್ಣು, ತೆಂಗಿನಕಾಯಿಯನ್ನು ರಥಕ್ಕೆ ಎಸೆದರು. ಪಕ್ಕದ ಗ್ರಾಮಗಳ ದೇವತೆಗಳ ವಿಗ್ರಹ ಮೂರ್ತಿಗಳನ್ನು ತೇರಿನ ಮುಂದೆ ತಂದು ಪೂಜೆ ಸಲ್ಲಿಸಿದರು.

ಶಾಸಕ ಡಾ.ವೈ.ಸಿ.ವಿಶ್ವನಾಥ್, ಹನ್ನೆರಡು ಹರಿವಾಣ ಗುಡಕಟ್ಟು ಸಮಿತಿಯ ಅಧ್ಯಕ್ಷ ಕೆ.ಎಂ.ಕೆಂಪರಾಜು, ಪ್ರಧಾನ ಗುರುಗಳಾದ ಕುಮಾರಸ್ವಾಮಿ ದಳವಾಯಿ ಹೂವಿನ ಗೋವಿಂದಪ್ಪ, ಜನರಲ್ ತಿಮ್ಮಯ್ಯ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ರಥೋತ್ಸವಕ್ಕೆ ಸೇರಿದ್ದ ಸಾವಿರಾರು ಭಕ್ತರಿಗೆ ಅನ್ನದಾಸೋಹ ವನ್ನು ಆಡಳಿತ ಮಂಡಳಿ  ಏರ್ಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.