ಶೃಂಗೇರಿ : ತಾಲ್ಲೂಕಿನ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪೀಠೋಪಕರಣ, ಪ್ರಯೋ ಗಾಲಯ ಹಾಗೂ ಕ್ರೀಡಾ ಸಾಮಗ್ರಿಗಳ ಖರೀದಿಯಲ್ಲಿ ಬೋಗಸ್ ಟೆಂಡರ್ ಸೃಷ್ಟಿಸಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್, ಜೆಡಿಎಸ್ ಹಾಗೂ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
2009-10ನೇ ಸಾಲಿನ 13ನೇ ಹಣಕಾಸು ಯೋಜನೆಯಲ್ಲಿ 5.55 ಲಕ್ಷ ಹಣವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಾಂತ ರಾಜ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನ ಕುಮಾರ್ ಸೇರಿ ಬೋಗಸ್ ಟೆಂಡರ್ ಸೃಷ್ಟಿಸಿ ಒಂದೊಂದು ಸಾಮಾಗ್ರಿಗಳಿಗೆ ಸುಮಾರು 4 ಪಟ್ಟು ಹೆಚ್ಚು ಹಣ ಭರಿಸಿ 4 ಲಕ್ಷ ಹಣವನ್ನು ಲೂಟಿ ಮಾಡಿದ್ದಾರೆ ಎಂದು ತಹಸೀಲ್ದಾರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಪ್ರತಿಭಟನಾಕಾರರು ದೂರಿದ್ದಾರೆ.
ಹಿಂದಿನ ಸಾಲಿನಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಉದ್ಯೋಗ ಖಾತರಿ ಯೋಜನೆಯಡಿ ಯಲ್ಲಿ ರೈತರಿಗೆ ಅಪ್ಪೆ ಮಾವಿನ ಸಸಿಗಳನ್ನು ವಿತರಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ತಾಲ್ಲೂಕು ಪಂಚಾ ಯಿತಿ ಕಾರ್ಯನಿರ್ವಹಣಾಧಿಕಾರಿ ಅನುಮೋದನೆ ನೀಡದೆ ರೈತರಿಗೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮನವಿಯೊಂದಿಗೆ ರಾಮನ್ ಲ್ಯಾಬ್ ಇಕ್ವಿಪ್ಮೆಂಟ್ ಅಂಡ್ ಕೆಮಿಕಲ್ಸ್ ಇದರಿಂದ ತರಿಸಲಾದ ದರಪಟ್ಟಿ ಹಾಗೂ ಭರತ್ ಸ್ಪೋರ್ಟ್ಸ್ ಅನುಸೈಂಟಿಪಿಕ್ ವರ್ಕ್ಸ್ ಕಂಪೆನಿಗಳ ದರಪಟ್ಟಿ ಇರಿಸಿದ್ದು, ಖರೀದಿಸಿದ ಟೆಂಡರ್ ಪಟ್ಟಿಗೂ ಖಾಸಗಿ ಯಾಗಿ ತರಿಸಿದ ಪಟ್ಟಿಗೂ ಇರುವ ಬಾರಿ ವ್ಯತ್ಯಾಸವನ್ನು ಗಮನಕ್ಕೆ ತಂದರು.
ತಹಸೀಲ್ದಾರ್ ಜಗದೀಶ್ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಮುಂದಿನ ಸೋಮವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದು, ಆ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕರೆಸಿ ವಿವರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ತಹಸೀಲ್ದಾರ್ ಅವರು ಬೇಡಿಕೆ ಒಪ್ಪಿಕೊಂಡು ಅದರಂತೆಯೇ ನಡೆದಿಕೊಳ್ಳುವುದಾಗಿ ತಿಳಿಸಿದ್ದಾರೆ.
ಆಶ್ರಯ ಮನೆ ಹಂಚಿಕೆ ಹಾಗೂ ಖರೀದಿಯಲ್ಲಿ ಬಾರೀ ವಂಚನೆ ನಡೆದಿದ್ದು ಸೂಕ್ತ ತನಿಖೆ ಕೈಗೊಂಡು ಅಕ್ರಮವಾಗಿ ಹೊಂದಿರುವ ಮನೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಮತ್ತೊಂದು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸೌಭಾಗ್ಯ ಗೋಪಾಲನ್, ಕಾಂಗ್ರೆಸ್ ಮುಖಂಡರಾದ ಕೆ.ಆರ್. ಉದಯ್ಕುಮಾರ್, ಮಾತೊಳ್ಳಿ ಸತೀಶ್, ಎಚ್.ಕೆ. ದಿನೇಶ್ ಹೆಗ್ಡೆ, ಕೆ.ಎನ್. ಗೋಪಾಲ ಹೆಗ್ಡೆ ಮಾರನಕೊಡಿಗೆ ನಟರಾಜ, ಗೀತಾಶ್ರೀನಿವಾಸ ನಾಯ್ಕ ಮತ್ತಿತರರು ಹಾಗೂ ಜೆಡಿಎಸ್ನ ಕೆ.ಎಸ್. ರಮೇಶ್, ರೈತ ಸಂಘದ ಬಂಡ್ಲಾಪುರ ಶ್ರೀಧರರಾವ್ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.