ಅಜ್ಜಂಪುರ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗಳಿಸಬೇಕು ಎಂದು ಮಾದಿಗ ದಂಡೋರ ಸಮಿತಿ ತಾಲ್ಲೂಕು ಅಧ್ಯಕ್ಷ ಕುಡ್ಲೂರು ಕುಮಾರ್ ಶುಕ್ರವಾರ ಆಗ್ರಹಿಸಿದರು.
ದಂಡೋರ ತಾಲ್ಲೂಕು ಸಮಿತಿ, ಮಾದಿಗ ಜನಾಂಗ ಜಾಗೃತಗೊಳಿಸಿ ವರದಿ ಅನುಷ್ಟಾನಕ್ಕೆ ಒತ್ತಾಯಿಸಲು ತಾಲ್ಲೂಕಾದ್ಯಂತ ಸಮಾಜಬಾಂಧವರನ್ನು ಸಂಘಟಿಸಲು ಹಮ್ಮಿಕೊಂಡಿರುವ ಕಾಲ್ನೆಡಿಗೆ ಜಾಥಾ ಪಟ್ಟಣದ ಸಮೀಪದ ಬಗ್ಗವಳ್ಳಿ ತಲುಪಿದಾಗ ಅವರು ಮಾ ನಾಡಿದರು.
ಪರಿಶಿಷ್ಟ ಜಾತಿಗಳಲ್ಲಿಯೇ ಅಧಿಕ ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯ ಸಾಕ್ಷರತೆ, ಉನ್ನತ ಶಿಕ್ಷಣ, ಉದ್ಯೋಗ, ಸವಲತ್ತು, ರಾಜಕೀಯ ಸ್ಥಾನಮಾನ ಹೊಂದುವಲ್ಲಿ ಹಿಂದುಳಿದಿದೆ. ಈ ಹಿನ್ನೆಲೆಯಲ್ಲಿ ತಾರತಮ್ಯತೆ ಹೋಗಲಾಡಿಸಲು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಟಾನಗೊಳ್ಳಬೇಕು ಎಂದರು.
ಉಪಾಧ್ಯಕ್ಷ ಟಿ.ಎಸ್.ಬಸವರಾಜ್ ಸದಾಶಿವ ಆಯೋಗದ ವರದಿ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ವಸ್ತು ನಿಷ್ಟ ಮತ್ತು ನ್ಯಾಯಸಮ್ಮತವಾಗಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವರದಿಯನ್ನು ಅವೈಜ್ಞಾನಿಕ ಎನ್ನುವ ಮೂಲಕ ಅನುಷ್ಟಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ. ರಾಜಕೀಯ ಪಕ್ಷಗಳು ನಮ್ಮಿಂದ ಮತ ಪಡೆದು ಒಳಮೀಸಲಾತಿ ಅನುಷ್ಟಾನಕ್ಕೆ ಸಹಕರಿಸದಿರುವುದು ವಿಷಾಧನೀಯ ಎಂದರು.
ಜಾಥದ ಮೂಲಕ ಇದೇ 8ರಂದು ಒತ್ತಾಯದ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡುವ ಮೂಲಕ ಪ್ರಧಾನಮಂತ್ರಿಗೆ ತಲುಪಿಸಲಾಗುವುದು ಎಂದು ಸಂಘದ ಮುಖಂಡರಾದ ಗಡೀಹಳ್ಳಿ ಶೇಖರಪ್ಪ ಹೇಳಿದರು.
ನಂದಿ ಶೇಖರಪ್ಪ ಸೇರಿದಂತೆ ಹಲವಾರು ದಲಿತ ಮುಖಂಡರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.