ಚಿಕ್ಕಮಗಳೂರು: ವಿವಿಧ ಧರ್ಮಗಳ ಧರ್ಮಗ್ರಂಥಗಳನ್ನು ಪಠಣ ಮಾಡುವುದರೊಂದಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 144ನೆಯ ಜನ್ಮದಿನವನ್ನು ಜಿಲ್ಲಾಡಳಿತ ಮಂಗಳವಾರ ಆಚರಿಸಿತು.
ಸಚಿವರು, ಜನಪ್ರತಿನಿಧಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಗಾಂಧಿ ಉದ್ಯಾನ ವನದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಟೌನ್ ಮಹಿಳಾ ಸಮಾಜದ ವಿದ್ಯಾರ್ಥಿಗಳು ಭಗವದ್ಗೀತೆ ಪಠಿಸಿದರು. ನಗರದ ಆಶಾಕಿರಣ ಅಂಧಮಕ್ಕಳ ಶಾಲೆ ವಿದ್ಯಾರ್ಥಿಗಳು ಭಕ್ತಿಗೀತೆಗಳನ್ನು, ವಿವಿಧ ಶಾಲಾ ಮಕ್ಕಳು ಗಾಂಧೀಜಿ ಕುರಿತ ಹಾಡುಗಳನ್ನು ಹಾಡಿದರು.
ಭಗವದ್ಗೀತೆಯನ್ನು ಶಶಿಕಾಂತ್ ಭಟ್, ಕುರಾನನ್ನು ಉಪ್ಪಳ್ಳಿ ಮಸೀದಿ ಧರ್ಮಗುರುಗಳು, ಬೈಬಲನ್ನು ಕ್ರೈಸ್ತ ಧರ್ಮಗುರು ಫಾದರ್ ಪ್ಯಾಟ್ರಿಕ್ ಪಠಣ ಮಾಡಿದರು.
ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಇಲಾಖೆ ಗಾಂಧೀಜಿ ಕುರಿತು ಹೊರತಂದಿರುವ ವಿಶೇಷಾಂಕವನ್ನು ಸಚಿವ ಸಿ.ಟಿ.ರವಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮಮದಲ್ಲಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ತೆಂಗುನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ, ನಗರಸಭೆ ಅಧ್ಯಕ್ಷ ಸಿ.ಆರ್.ಪ್ರೇಂಕುಮಾರ್, ಉಪಾಧ್ಯಕ್ಷೆ ಲಕ್ಷ್ಮಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ರಾಜಪ್ಪ, ಜಿಲ್ಲಾಧಿಕಾರಿ ಅಂಜನ್ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಸಂಘಸಂಸ್ಥೆ, ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ಗಾಂಧೀಜಿ ವೇಷ: ಗಾಂಧೀಜಿ ವೇಷಧಾರಿ ಉಪ್ಪಳ್ಳಿಯ ಸಿದ್ದಪ್ಪ ಗಮನ ಸೆಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.