ಮೂಡಿಗೆರೆ: ಸರ್ವಧರ್ಮಗಳು ಸಮಾಜದಲ್ಲಿ ಸೌಹಾರ್ದಯುತವಾಗಿ ನೆಲೆಸುವುದೇ ಎಲ್ಲ ಧರ್ಮಗಳ ತಳಹದಿ ಯಾಗಿದೆ ಎಂದು ಚಿಕ್ಕಮಗಳೂರಿನ ಕ್ರೈಸ್ತ ಧರ್ಮಗುರು ಟಿ. ಅಂಥೋನಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬಣಕಲ್ ಗ್ರಾಮದ ಬಾಲಿಕಾ ಮರಿಯಾ ಚರ್ಚ್ನಲ್ಲಿ ಭಾನುವಾರ ಏರ್ಪಡಿಸಿದ್ದ ಕ್ರೈಸ್ತ ಸಂಸ್ಕಾರ ದೀಕ್ಷೆ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.
‘ನಾವು ಸುಖವಾಗಿ ಬದುಕಲು ನಮ್ಮ ನೆರೆಹೊರೆಯವರು ಸುಖವಾಗಿರುವುದು ಅವಶ್ಯಕವಾಗಿದೆ. ನಮ್ಮ ಸುತ್ತಲಿನ ಜನರು ಸಂಕಷ್ಟಗಳನ್ನು ಎದುರಿಸುವಾಗ, ನಾವು ಸುಖದಿಂದ ಬಾಳಲು ಸಾಧ್ಯವಿಲ್ಲ. ಆದ್ದರಿಂದ ಸಮಾಜದ ಎಲ್ಲರೂ ಸುಖವಾಗಿರುವಂತೆ ನಾವು ಶ್ರಮಿಸಬೇಕು’ ಎಂದರು.
ಜಗತ್ತಿನಲ್ಲಿರುವ ಎಲ್ಲ ಧರ್ಮಗಳು ಮಾನವರು ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು ಎಂಬ ಸಾರವನ್ನು ಹೊಂದಿವೆ. ಯಾವುದೇ ಧರ್ಮದಲ್ಲಿಯೂ ಅಶಾಂತಿಯನ್ನು ಬಯಸಿಲ್ಲ. ಕ್ರೈಸ್ತ ಧರ್ಮದಲ್ಲೂ ಕೂಡ ಹಸಿದವರಿಗೆ ಅನ್ನ ನೀಡುವುದು, ನೊಂದವರಿಗೆ ನೆರವಾಗುವುದು ಭಗವಂತನ ಸೇವೆಗಿಂತಲೂ ಹೆಚ್ಚಿನ ಸ್ಥಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
ಧರ್ಮದ ಬಗ್ಗೆ ಅರಿಯದವರು ನಾಸ್ತಿಕನಾಗುತ್ತಾರೆ. ಕ್ರೈಸ್ತ ಸಂಸ್ಕಾರದಿಂದ ಪವಿತ್ರಾತ್ಮರ ವರದಾನ ಪಡೆದು, ಕ್ರೈಸ್ತ ಧರ್ಮದ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಸಂಸ್ಕಾರಯುತ ವ್ಯಕ್ತಿಯಾಗಬೇಕು ಎಂದರು.
ಬಣಕಲ್ ಬಾಲಿಕಾ ಮರಿಯ ಚರ್ಚ್ನ ಧರ್ಮಗುರು ಆಲ್ಬರ್ಟ್ ಡಿಸಿಲ್ವಾ ಮಾತನಾಡಿ, ‘ಜೀವನವನ್ನು ಹೇಗೋ ಸಾಗಿಸುವುದರಿಂದ ಜೀವನ ಪಡೆದ ಉದ್ದೇಶ ಸಾರ್ಥಕವಾಗುವುದಿಲ್ಲ. ಜೀವನವನ್ನು ಧರ್ಮದ ನಿಯಮಗಳ ಅನುಸಾರ ಸಾಗಿಸಿದರೆ ಮಾತ್ರ ಗೌರವಯುತ ಜೀವನ ನಮ್ಮದಾಗಲು ಸಾಧ್ಯವಾಗುತ್ತದೆ. ನಾವು ಸಮಾಜದಲ್ಲಿ ಆದರ್ಶ ಜೀವನ ರೂಪಿಸಿಕೊಂಡರೆ, ಸಮಾಜದಲ್ಲಿ ಇತರರಿಗೂ ಮಾದರಿಯಾಗಬಹುದು’ ಎಂದು ಹೇಳಿದರು.
ಬಣಕಲ್ ಬಾಲಿಕಾ ಮರಿಯ ಚರ್ಚ್ ವ್ಯಾಪ್ತಿಯ ಸುಮಾರು 50 ಮಂದಿಗೆ ಕ್ರೈಸ್ತ ಸಂಸ್ಕಾರ ದೀಕ್ಷೆ ನೀಡಲಾಯಿತು. ಧರ್ಮಗುರುಗಳಾದ ಚಾರ್ಲ್ಸ್ ಸಲ್ದಾನ, ಡೆನಿಸ್ ಡಿಸೋಜ, ವಿನ್ಸೆಂಟ್ ಡಿಸೋಜ, ದೀಪ್ತಿ, ಅಮಲ್ರಾಣಿ, ಆಲೀಸ್, ಪ್ರಾನ್ಸಿಸ್ಲೋಬೊ, ಫ್ಲೋರಿನ್ ಪಿರೇರಾ, ಚರ್ಚ್ ಪಾಲನಾ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.