ADVERTISEMENT

ಸಾಧನೆಗೆ ಶಿಸ್ತು, ಸಮಯಪ್ರಜ್ಞೆ ಮುಖ್ಯ

ವರಪ್ರದ ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿ ವಾಲ್ಟರ್ ಕಾರ್ಡೋಜ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 13:00 IST
Last Updated 5 ಜೂನ್ 2018, 13:00 IST

ಕಡೂರು: ಉತ್ತಮ ಸಾಧನೆಗೆ ಶಿಸ್ತು ಮತ್ತು ಸಮಯಪ್ರಜ್ಞೆ ಬಹುಮುಖ್ಯವಾದ ಸಾಧನ ಎಂದು ವರಪ್ರದ ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿ ವಾಲ್ಟರ್ ಕಾರ್ಡೋಜಾ ತಿಳಿಸಿದರು.

ಕಡೂರಿನ ವರಪ್ರದ ಕಾಲೇಜು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ನೂತನ ವಿದ್ಯಾರ್ಥಿಗಳ ಶುಭಾರಂಭ ಹಾಗೂ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳ ಜವಾಬ್ದಾರಿ ಕೇವಲ ಶಿಕ್ಷಕರಿಗಷ್ಟೇ ಸೀಮಿತವಲ್ಲ. ಪೋಷಕರಿಗೂ ಹೆಚ್ಚಿನ ಜವಾಬ್ದಾರಿ ಇರುತ್ತದೆ. ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಮತ್ತು ಶಿಸ್ತು ಬೆಳೆಸಲು ಶಿಕ್ಷಕರು ಮುಂದಾಗಬೇಕು. ಆ ಶಿಸ್ತಿನ ಪಾಠ ಮನೆಯಲ್ಲಿಯೇ ಆರಂಭವಾಗಬೇಕು. ಕಾಲೇಜು ಮೋಜಿನ ತಾಣವಲ್ಲ. ಅದು ನಮ್ಮ ಭವಿಷ್ಯವನ್ನು ರೂಪಿಸುವ ಹಾಗು ನೈತಿಕ ಶಿಕ್ಷಣವನ್ನು ನೀಡುವ ದೇಗುಲ ಎಂದು ವಿದ್ಯಾರ್ಥಿಗಳು ಪರಿಭಾವಿಸಬೇಕು’ ಎಂದರು.

ADVERTISEMENT

ಕಾಲೇಜು ಪ್ರಾಂಶುಪಾಲ ಕಾಂತರಾಜು ಮಾತನಾಡಿ, ‘ಹಣ ಗಳಿಕೆಯ ದೃಷ್ಟಿಯಿಂದ ಈ ಕಾಲೇಜು ಆರಂಭಿಸಿಲ್ಲ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನಮ್ಮೂರಿನಲ್ಲಿಯೂ ದೊರೆಯುತ್ತದೆ ಎಂಬ ಹೆಸರು ಗಳಿಸಬೇಕು. ಆರಂಭದಿಂದಲೂ ವರಪ್ರದ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಗುಣಮಟ್ಟದ ಕಾಲೇಜು ಎಂಬ ಹೆಸರು ಪಡೆಯಬೇಕು ಎಂಬ ಆಶಯವಿದೆ. ವಿದ್ಯಾರ್ಥಿಗಳು ಈ ಆಶಯವನ್ನು ಈಡೇರಿಸುವ ಹೊಣೆ ಹೊತ್ತು ಕಾಲೇಜಿಗೆ ಕೀರ್ತಿ ತರಬೇಕು’ ಎಂದು ಹಾರೈಸಿದರು.

ಈ ಭಾರಿ ಪಿಯು ವಿಜ್ಞಾನ ವಿಭಾಗದಲ್ಲಿ ಕಾಲೇಜು ಹಾಗೂ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ಚಂದ್ರಶೇಖರ್ ಗೆ ₹ 10 ಸಾವಿರ ಹಾಗೂ ಮತ್ತೊಬ್ಬ ವಿದ್ಯಾರ್ಥಿ ಬಸವರಾಜು ಸಾಧನೆಯನ್ನು ಗೌರವಿಸಿ ₹ 5 ಸಾವಿರ ನೀಡಿ ಸನ್ಮಾನಿಸಲಾಯಿತು.

ತಿಪಟೂರು ಕಾಲೇಜಿನ ಪ್ರೊ. ಶಂಕರ್ ಆರಾಧ್ಯ ಮಕ್ಕಳಿಗೆ ವಿಜ್ಞಾನ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಕಾಲೇಜಿನ ಸಲಹಾ ಸಮಿತಿಯ ಅಧ್ಯಕ್ಷರಾದ ಸಂದೇಶ್ ಕುಮಾರ್, ಉಪನ್ಯಾಸಕರಾದ ಕೇಶವಮೂರ್ತಿ, ಸದಾಫ್, ಸಂತೋಷ್, ವಾಣಿಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.