ಚಿಕ್ಕಮಗಳೂರು: ಸಾಮಿಲ್ ಮಾಲೀಕರು ಈ ಹಿಂದಿನಂತೆ ಕಾಫಿ ಬೆಳೆಗಾರರು ಸಾಮಿಲ್ಗೆ ಮರ ನೀಡಿದಾಗ ಅದರ ಪ್ರಮಾಣದಲ್ಲಿ ಶೇ.10 ಕಡಿತ ಗೊಳಿಸುತ್ತಿರುವುದನ್ನು ತಡೆದು ಕಾಫಿ ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡುವಂತೆ ಬೆಳೆಗಾರರ ಹಿರತಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ಉತ್ತಮ್ಗೌಡ, ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ನೇತೃತ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಈ ಹಿಂದಿನ ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡರಿಗೆ ಮನವಿ ಸಲ್ಲಿಸಿದ್ದಾಗ ಸಾಮಿಲ್ ಮಾಲೀಕರು ಮತ್ತು ಕಾಫಿ ಬೆಳೆಗಾರರು ಹಾಗೂ ಮರದ ವ್ಯಾಪಾರಿಗಳ ಸಭೆ ನಡೆಸಿ, ಸಾಮಿಲ್ ಮಾಲೀಕರು ಮಾಡುತ್ತಿರುವ ಶೇ.10ರ ಕಡಿತ ನಿಲ್ಲಿಸಲು ಸೂಚಿಸಿದ್ದರು. ಇದಕ್ಕೆ ಎಲ್ಲರೂ ಒಪ್ಪಿದ್ದರು.
ಹಿಂದಿನ ಜಿಲ್ಲಾಧಿಕಾರಿ ವರ್ಗಾವಣೆಯಾದ ನಂತರ ಸಾಮಿಲ್ ಮಾಲೀಕರು ಮೊದಲಿನಂತೆ ಮರದ ಪ್ರಮಾಣದಲ್ಲಿ ಶೇ.10 ಕಡಿತ ಮುಂದುವರಿಸಿದ್ದಾರೆ. ಈ ಬಗ್ಗೆ ಪರಿ ಶೀಲಿಸಿ ಶೇ.10 ಕಡಿತ ನಿಷೇಧಿಸಿ, ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಮಳೆಗಾಲದಲ್ಲಿ ಮರ ತುಂಬಿದ ಟಿಂಬರ್ ಲಾರಿಗಳು ಓಡಾಡುವುದರಿಂದ ಮಲೆನಾಡು ಭಾಗದ ಬಹುತೇಕ ರಸ್ತೆಗಳು ಗುಂಡಿ-ಗೊಟರುಗಳಿಂದ ಕೂಡಿ ಹಾಳಾಗುತ್ತವೆ. ಆದ್ದರಿಂದ ಮಳೆಗಾಲದ ನಂತರ ಮರ ತುಂಬಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
9ರಂದು ಸಭೆ: ಇದೇ 9ರಂದು ಮತ್ತಾವರ ಅರಣ್ಯ ಮಾಹಿತಿ ಕೇಂದ್ರದಲ್ಲಿ ಕಾಫಿ ಬೆಳೆಗಾರರು ಮತ್ತು ಸಾಮಿಲ್ ಮಾಲೀಕರ ಸಭೆ ಕರೆದು ಚರ್ಚೆ ನಡೆಸಿದ ಬಳಿಕ ನ್ಯಾಯ ದೊರಕಿಸಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಉತ್ತಮ್ಗೌಡ ತಿಳಿಸಿದ್ದಾರೆ. ಕಾರ್ಯದರ್ಶಿ ದಯಾನಂದ್ ಮಾಕೋಡ್, ಎ.ಕೆ.ವಸಂತೇಗೌಡ, ಎ.ಆರ್.ಪೂರ್ಣೇ ಶ್, ಸೋಮಶೇಖರ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.