ADVERTISEMENT

‘ಯೋಗದಿಂದ ವಂಶವಾಹಿ ಕಾಯಿಲೆ ನಿವಾರಣೆ’

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 6:54 IST
Last Updated 10 ಮಾರ್ಚ್ 2014, 6:54 IST

ಚಿಕ್ಕಮಗಳೂರು: ವಂಶವಾಹಿನಿಯಾಗಿ ಬರುವ ಅನೇಕ ರೋಗಗಳನ್ನು ಯೋಗ­ದಿಂದ ನಿಯಂತ್ರಿಸಬಹುದು ಎಂದು ಬಾಗಲಕೋಟೆ ಕೃಷ್ಣಾಶ್ರಮದ ಯೋಗ­ಗುರು ಬಸವರಾಜ ಹಡಗಲಿ ತಿಳಿಸಿದರು.

ನಗರದ ಯುರೇಕಾ ಅಕಾಡೆಮಿ­ಯಲ್ಲಿ ಉದ್ಭವ ಪ್ರಕಾಶನ ಮತ್ತು ಯುರೇಕಾ ಅಕಾಡೆಮಿ ಸಹಯೋಗ­ದೊಂದಿಗೆ ಹಮ್ಮಿಕೊಂಡಿದ್ದ ಯೋಗ ಮತ್ತು ಆರೋಗ್ಯ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಲವರು ಆಸನಗಳನ್ನೆ ಯೋಗ ಎಂದು ತಪ್ಪಾಗಿ ಭಾವಿಸಿದ್ದಾರೆ. ಆಸನ, ಪ್ರಾಣಾಯಾಮ, ಧ್ಯಾನ ಇವುಗಳ ಯೋಗಾಸನದ ಅಂಗಗಳು. ಯೋಗ ಎಂಬುದು ಆಂತರಿಕ ಅನುಭೂತಿ, ಸ್ವಅನುಭವದಿಂದ ಪಡೆಯುವ ಸಿದ್ಧಿ ಎಂದು ಹೇಳಿದರು.

ಇಂದಿನ ಯಾಂತ್ರಿಕ ಬದುಕು ಮನುಷ್ಯ­ನನ್ನು ಆವರಿಸಿದೆ. ಹಣ ಗಳಿಸುವ ಕಾತರ ಹೆಚ್ಚಿದೆ. ಲೌಕಿಕ ಸಂಪ­ತ್ತನ್ನೆ ಸುಖ ಎಂದು ಜನರು ಭ್ರಮಿಸಿ­ದ್ದಾರೆ ಎಂದರು.

ಸಾವಧಾನವಾಗಿ ಬದುಕನ್ನು ಸಿಂಹಾ­ವಲೋಕನ ಮಾಡಿದಾಗ ಮಾತ್ರ ನಾವು ಎಷ್ಟು ಸಮಯ ವ್ಯರ್ಥ­ವಾಗಿ ಕಳೆದಿದ್ದೇವೆ ಎಂಬುದು ಅರಿವಾ­ಗುತ್ತದೆ. ಆಸನಗಳು ದೇಹದ ತೂಕ ಕಡಿಮೆ ಮಾಡುವುದರೊಂದಿಗೆ ಆರೋಗ್ಯ­­ಮಯ ಸಂದೇಶ ಉಂಟು ಮಾಡುತ್ತವೆ ಎಂದರು.

ಆಂತರಿಕ ಜ್ಞಾನಸಿದ್ಧಿಯೇ ಯೋಗ. ಮನಸ್ಸನ್ನು ನಿಯಂತ್ರಿಸುವ ಅಂತ­ರಂಗದ ಘನತ ಅರಿಯುವ ಸಿದ್ಧಿಗೆ ನಿರಂತರ ಸಾಧನೆ ಮುಖ್ಯ ಎಂದರು.

ಉದ್ಭವ ಪ್ರಕಾಶನದ ಅಧ್ಯಕ್ಷ  ಜೆ.ಪಿ.­ಕೃಷ್ಣೇಗೌಡ ಮಾತನಾಡಿ, ಆರೋ­­ಗ್ಯವೆ ಮಾನವನ ದೊಡ್ಡ ಆಸ್ತಿ. ಅದು ಇದ್ದರೆ ಏನನ್ನಾದರೂ ಸಾಧಿಸ­ಬಹುದು ಎಂದರು.

ಯುರೇಕಾ ಅಕಾಡೆಮಿ ಪ್ರಾಂಶು­ಪಾಲ ದೀಪಕ್ ದೊಡ್ಡಯ್ಯ ಉದ್ಘಾಟಿ­ಸಿದರು. ದಾನಿ ಗೌರಮ್ಮಬಸವೇಗೌಡ, ಕೆ.ಮೋಹನ್, ಡಾ.ಸಿ.ಕೆ.ಸುಬ್ಬರಾಯ, ಲೇಖಕರಾದ ಬೆಳವಾಡಿ ಮಂಜು­ನಾಥ, ರಮೇಶ್ ಬೊಂಗಾಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.