ADVERTISEMENT

₹1.27 ಕೋಟಿ ಮೌಲ್ಯದ ಆಸ್ತಿ ಘೋಷಣೆ

ಶಾಸಕ ಡಿ.ಎನ್. ಜೀವರಾಜ್ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 6:07 IST
Last Updated 20 ಏಪ್ರಿಲ್ 2018, 6:07 IST

ಕೊಪ್ಪ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಡಿ.ಎನ್. ಜೀವರಾಜ್ ಗುರುವಾರ ಮೊತ್ತ ಮೊದಲಿಗರಾಗಿ ನಾಮಪತ್ರ ಸಲ್ಲಿಸಿದರು. ಕ್ಷೇತ್ರ ಚುನಾವಣಾಧಿಕಾರಿ ನಂಜುಂಡೇ ಗೌಡರಿಗೆ ತ್ರಿಪ್ರತಿಗಳಲ್ಲಿ ಸಲ್ಲಿಸಿದ ನಾಮ ಪತ್ರಗಳಿಗೆ ಎಂ.ಎಸ್. ಸತೀಶ್, ಇಂದಿರಾ, ಕೆ.ಎಸ್. ಶ್ರೀಧರರಾವ್ ಸೂಚಕರಾಗಿ ಸಹಿ ಹಾಕಿದರು. ಆ ಮೂಲಕ ಜೀವ ರಾಜ್ ಒಂದೇ ಪಕ್ಷದಿಂದ ಸತತ 6 ಬಾರಿ ಸ್ಪರ್ಧಿಸಿದ ದಾಖಲೆ ಮಾಡಿದರು.

1.27 ಕೋಟಿ ಆಸ್ತಿ ಘೋಷಣೆ : ನರಸಿಂ ಹರಾಜಪುರ ತಾಲ್ಲೂಕು ಬಡಗಬೈಲು ಗ್ರಾಮದ ದ್ವಾರಮಕ್ಕಿ ನಿವಾಸಿ, 54 ವಯಸ್ಸಿನ, ಪಿಯುಸಿ ವಿದ್ಯಾರ್ಹತೆ ಹೊಂದಿರುವ ಡಿ.ಎನ್. ಜೀವರಾಜ್ ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಘೋಷಣಾಪತ್ರದಲ್ಲಿ, ತಾವು ₹1.26 ಕೋಟಿ ಮೌಲ್ಯದ ಚರಾಸ್ತಿ, ₹1.86 ಲಕ್ಷ ಮೌಲ್ಯದ ಸ್ಥಿರಾಸ್ತಿ ಹಾಗೂ ₹77 ಲಕ್ಷ ಮೌಲ್ಯದ ಪಿತ್ರಾರ್ಜಿತ ಆಸ್ತಿ ಹೊಂದಿರುವುದಾಗಿಯೂ, ಪತ್ನಿ ಎಂ.ಎಸ್. ನಿವೇದಿತಾ ₹ 30.42 ಲಕ್ಷ ಮೌಲ್ಯದ ಚರಾಸ್ತಿ, ₹1.17 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿಯೂ, ವೈದ್ಯಕೀಯ ಶಿಕ್ಷಣ (ಎಂ.ಬಿ.ಬಿ.ಎಸ್.) ಕಲಿಯುತ್ತಿರುವ ಮಗ ಡಿ.ಜೆ.ಸುಧನ್ವ ಯಾವುದೇ ಆಸ್ತಿ ಹೊಂದಿಲ್ಲವೆಂದೂ ಘೋಷಿಸಿದ್ದಾರೆ.

ಜೀವರಾಜ್ ತಮ್ಮ ಬಳಿ ₹4 ಲಕ್ಷ ನಗದು ಇರಿಸಿಕೊಂಡಿದ್ದು, ನರಸಿಂಹ ರಾಜಪುರ, ಕೊಪ್ಪ ಮತ್ತು ಬೆಂಗಳೂರಿನ ವಿವಿಧ ಬ್ಯಾಂಕುಗಳಲ್ಲಿ ₹ 22.25 ಲಕ್ಷ ನಗದು, ₹81 ಲಕ್ಷ ಮೌಲ್ಯದ ಷೇರು ಪತ್ರ, ₹10ಲಕ್ಷ ಮೊತ್ತದ ಎಲ್.ಐ.ಸಿ. ಬಾಂಡ್ ಹೊಂದಿದ್ದಾರೆ. ₹50
ಸಾವಿರ ಮೌಲ್ಯದ ಮಾರುತಿ ಎಸ್ಟೀಮ್, ₹5 ಲಕ್ಷ ಮೌಲ್ಯದ ಟೊಯೆಟ ಕ್ವಾಲಿಸ್, ₹30 ಸಾವಿರ ಮೌಲ್ಯದ ಟಿಲ್ಲರ್, ₹25.27 ಲಕ್ಷ ಮೌಲ್ಯದ ಇನ್ನೋವಾ ಕಾರು ಅವರ ಬಳಿ ಇದೆ. ₹7 ಲಕ್ಷ ಮೌಲ್ಯದ 200 ಗ್ರಾಂ ಬಂಗಾರ, ₹2.25 ಕೆ.ಜಿ. ಬೆಳ್ಳಿಯ ಒಡವೆ, ವಸ್ತುಗಳನ್ನು ಹೊಂದಿದ್ದಾರೆ. ಸೂರ್ಯೋದಯ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ₹17.93 ಲಕ್ಷ ಪಾಲುದಾರಿಕೆಯಿದ್ದು, ಬಡಗಬೈಲು ಗ್ರಾಮದಲ್ಲಿ 6.10 ಎಕರೆ ಪಿತ್ರಾರ್ಜಿತ ಆಸ್ತಿ, ಮೆಣಸೂರಿನಲ್ಲಿ 1 ಎಕರೆ ಜಾಗ, ಜಯಪುದಲ್ಲಿ 150/150 ಅಡಿ ವಿಸ್ತೀರ್ಣದ ನಿವೇಶನ, ದ್ವಾರಮಕ್ಕಿಯಲ್ಲಿ ಮನೆ, ಬೆಂಗಳೂರು ಯಲಿಗುಂಟೆಯಲ್ಲಿ ಅಪಾರ್ಟ್ ಮೆಂಟ್ ಸೇರಿದಂತೆ ಒಟ್ಟು ₹2.63 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ADVERTISEMENT

ತಾನು ಸಾಲಗಾರ, ಶಾಸಕ ದತ್ತರಿಗೆ ಸಾಲಿಗ: ವಿವಿಧ ಬ್ಯಾಂಕುಗಳಲ್ಲಿ ಒಟ್ಟು ₹36.46 ಲಕ್ಷ ಸಾಲ ಮಾಡಿರುವ ಶಾಸಕ ಜೀವರಾಜ್ ಅವರು ಕಡೂರು ಶಾಸಕ ದತ್ತ ಅವರಿಗೆ ತಾವೇ ₹ 8 ಲಕ್ಷ ಸಾಲ ನೀಡಿರುವುದಾಗಿ ಘೋಷಣಾ ಪತ್ರದಲ್ಲಿ ತಿಳಿಸಿದ್ದಾರೆ.

ಒಂದು ಕೇಸ್ ಬಾಕಿ: ಜೀವರಾಜ್ ವಿರುದ್ಧ ಚಿಕ್ಕಮಗಳೂರಿನ ಲೋಕಾ ಯುಕ್ತ ನ್ಯಾಯಾಲಯದಲ್ಲಿ ದಾಖಲಾ ಗಿದ್ದ ವಿವಿಧ ಮೊಕದ್ದಮೆಗಳ ಪೈಕಿ ಒಂದು ಮೊಕದ್ದಮೆ ಇತ್ಯರ್ಥಕ್ಕೆ ಬಾಕಿ ಇದೆಯಂತೆ. ಜೀವರಾಜ್ ಪತ್ನಿ ಎಂ.ಎಸ್. ನಿವೇದಿತಾ ತಮ್ಮ ಬಳಿ ₹1 ಲಕ್ಷ ನಗದು ಇರಿಸಿಕೊಂಡಿದ್ದು, ವಿವಿಧ ಬ್ಯಾಂಕುಗಳಲ್ಲಿ ₹2.64 ಲಕ್ಷ ಠೇವಣಿ, ₹3 ಲಕ್ಷ ಮೊತ್ತದ ಷೇರುಪತ್ರ, ₹10ಲಕ್ಷ ಮೊತ್ತದ ಎಲ್.ಐ.ಸಿ. ಬಾಂಡ್, ₹17.19 ಲಕ್ಷ ಮೌಲ್ಯದ 600 ಗ್ರಾಂ ಚಿನ್ನ, 1ಕೆ.ಜಿ. ಬೆಳ್ಳಿಯ ಒಡವೆ, ವಸ್ತುಗಳನ್ನು ಹೊಂದಿದ್ದಾರೆ.

ಬಡಗಬೈಲು ಗ್ರಾಮದಲ್ಲಿ 2.20ಎಕರೆ ಆಸ್ತಿ, ಎನ್‌ಆರ್‌ಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ₹24 ಲಕ್ಷ ಮೌಲ್ಯದ 4 ನಿವೇಶನ, ಬಿ.ಎಚ್. ಕೈಮರದಲ್ಲಿ ₹30 ಲಕ್ಷ ಮೌಲ್ಯದ ವಾಣಿಜ್ಯ ಕಟ್ಟಡ ಹೊಂದಿರುವ ಅವರು. ₹11.62 ಲಕ್ಷ ಸಾಲಗಾರರಾಗಿದ್ದಾರೆಂದು ಘೋಷಣಾ ಪತ್ರದಲ್ಲಿ ಜೀವರಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.