ADVERTISEMENT

ಗೋಮಾಳ ತಡೆಯಾಜ್ಞೆ ತೆರವುಗೊಳಿಸಿದ್ದು ಬಿಜೆಪಿ : ಗೋಪಾಲ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 8:50 IST
Last Updated 6 ಜನವರಿ 2018, 8:50 IST

ನರಸಿಂಹರಾಜಪುರ: ಗೋಮಾಳ ಜಮೀನಿನಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿದ ರೈತರಿಗೆ ಜಮೀನು ಸಕ್ರಮಗೊಳಿಸಲು ಹೈಕೋರ್ಟ್‌ನಲ್ಲಿದ್ದ ತಡೆಯಾಜ್ಞೆಯನ್ನು ತೆರವುಗೊಂಡಿರುವುದು ಬಿಜೆಪಿ ಪ್ರಯತ್ನದ ಫಲ ಎಂದು ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಗೋಪಾಲ್ ಮತ್ತು ಕೆಸವೆ ಮಂಜುನಾಥ್ ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ತಡೆಯಾಜ್ಞೆ ತೆರವು ಗೊಳಿಸಿದ ಪ್ರತಿಯನ್ನು ಶಾಸಕರು ತಂದು ಕ್ಷೇತ್ರದ ತಹಶೀಲ್ದಾರ್ ಅವರಿಗೆ ನೀಡಿ ಸಾಗುವಳಿ ಚೀಟಿ ವಿತರಿಸಲು ಆದೇಶ ನೀಡಿದ ಫಲವಾಗಿ ಸುಮಾರು 380 ಸಾಗುವಳಿ ಚೀಟಿ ನೀಡಿರುತ್ತಾರೆ. ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ಅನಗತ್ಯ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ.

3ರಂದು ಶಾಸಕ ಡಿ.ಎನ್.ಜೀವರಾಜ್ ಅಧ್ಯಕ್ಷತೆಯಲ್ಲಿ ನಡೆದ ಖಾಂಡ್ಯ ಹೋಬಳಿ ಅಕ್ರಮ ಸಕ್ರಮ ಸಮಿತಿಯಲ್ಲಿ 55 ಅರ್ಜಿಗಳ ಸ್ಥಿರೀಕರಣ ಮಾಡಲಾಗಿದೆ. 45 ಅರ್ಜಿಗಳ ಪರಿಶೀಲನೆಯ ಪ್ರಥಮ ಸಭೆ ನಡೆದಿದೆ. ಶೀಘ್ರದಲ್ಲೇ 220 ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಿಸಲಾಗುವುದು ಎಂದಿದ್ದಾರೆ.

ADVERTISEMENT

ಇದೇ 11ರಂದು ಬೆಳಿಗ್ಗೆ ಕೊಪ್ಪ ಮತ್ತು ಮಧ್ಯಾಹ್ನ ಎನ್,ಆರ್.ಪುರ ತಾಲ್ಲೂಕು ಕಚೇರಿಯಲ್ಲಿ ಅಕ್ರಮ ಸಕ್ರಮ ಸಮಿತಿಯ ಸಭೆ ನಡೆಯಲಿದೆ. ಹಿಂದಿನ ಸಭೆಗಳಲ್ಲಿ ಸ್ಥಿರೀಕರಣಗೊಂಡ ಬಾಕಿ ಇರುವ ಕಡತಗಳ ಎಲ್ಲಾ ಅರ್ಜಿದಾರರಿಗೆ ಸಾಗುವಳಿ ಚೀಟಿ ನೀಡಿ ಸಭೆ ನಡೆಸಲು ಈಗಾಗಲೇ ತಹಶೀಲ್ದಾರರಿಗೆ ಶಾಸಕರು ಸ್ಪಷ್ಟ ಸೂಚನೆ ನೀಡಿದ್ದಾರೆ.

ಆದರೆ, ಕೆಲವರು ಅನಗತ್ಯವಾಗಿ ಜನಸಾಮಾನ್ಯರಲ್ಲಿ ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ಶಾಸಕರು ಬಗರ್‌ಹುಕುಂ ಸಾಗುವಳಿದಾರರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಮುಂದಿನ ಸಭೆಯಲ್ಲಿ ಸ್ಥಿರೀಕರಣಗೊಂಡ ಎಲ್ಲರಿಗೂ ಸಾಗುವಳಿ ಚೀಟಿ ನೀಡಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.