ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 9:18 IST
Last Updated 14 ಜನವರಿ 2018, 9:18 IST
ಎಚ್.ಡಿ. ದೇವೇಗೌಡ
ಎಚ್.ಡಿ. ದೇವೇಗೌಡ   

ಕೊಪ್ಪ: ಯಾವುದೇ ಪಕ್ಷವನ್ನು ಅವಲಂಬಿಸದೆ ಸ್ವಂತ ಶಕ್ತಿಯಿಂದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಸಂಸದ ಎಚ್.ಡಿ. ದೇವೇಗೌಡ ತಿಳಿಸಿದರು.

ಪಟ್ಟಣ ಸಮೀಪದ ಮಣಿಪುರದಲ್ಲಿರುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಜಿ. ವೆಂಕಟೇಶ್ ಅವರ ನಿವಾಸಕ್ಕೆ ಶನಿವಾರ ಪತ್ನಿ ಚೆನ್ನಮ್ಮನವರೊಂದಿಗೆ ಬಂದಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘5 ವರ್ಷ ಬಿಜೆಪಿ ಆಡಳಿತ ಮತ್ತು ಈಗಿನ ಕಾಂಗ್ರೆಸ್ ಆಡಳಿತವನ್ನು ಜನತೆ ನೋಡಿ ಬೇಸತ್ತಿದ್ದಾರೆ. ಜೆಡಿಎಸ್‌ಗೂ ಒಂದು ಅವಕಾಶ ಕೊಟ್ಟು ನೋಡೋಣ ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿದೆ. ನಮ್ಮ ಪಕ್ಷ ಈ ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡುವುದಿಲ್ಲ ಎಂದರು.

ADVERTISEMENT

ಶೃಂಗೇರಿ ದೇವಸ್ಥಾನದಲ್ಲಿ ನಡೆಸು ತ್ತಿರುವ ಅತಿರುದ್ರ ಯಾಗದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ‘ಪತ್ನಿ ಚೆನ್ನಮ್ಮ ಸೇರಿದಂತೆ ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆ, ಸಂಕಷ್ಟಗಳ ನಿವಾರಣೆಗಾಗಿ ಜ್ಯೋತಿಷಿಗಳ ಸಲಹೆಯಂತೆ ಪೂಜೆ ನಡೆಸಿದ್ದೇವೆ’ ಎಂದರು.

‘ನಿಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುವುದಾಗಿ ಹೇಳಿ ಈಗ ನಾಲ್ವರ ಹೆಸರು ಘೋಷಣೆಯಾಗಿದೆಯಲ್ಲಾ?’ ಎಂಬ ಪ್ರಶ್ನೆಗೆ ‘10 ಜನ ನಿಲ್ಲಲಿ. ಆಡಳಿತದ ವಿಷಯಕ್ಕೆ ಬಂದರೆ ಇದು ವಿಷಯವೇ ಅಲ್ಲ. ಬರೀ ಕುಟುಂಬ ಕುಟುಂಬ ಅಂದ್ರೆ ನನ್ನ ಅಪ್ಪನ ಆಸ್ತಿನಾ ಇದು? ಇಂತಹ ಪ್ರಶ್ನೆ ಕೇಳುವವರು ಶ್ರಮ ವ್ಯರ್ಥಗೊಳಿಸಿ ತಾತ್ಕಾಲಿಕ ಸಂತೋಷ ಪಡಬಹುದಷ್ಟೆ’ ಎಂದರು.

ಶೃಂಗೇರಿಯಲ್ಲಿ ಒಮ್ಮತದ ಅಭ್ಯರ್ಥಿ: ರಾಜ್ಯದಲ್ಲಿ ಜೆಡಿಎಸ್‌ನಲ್ಲಿ ಯಾವುದೇ ಅಭ್ಯರ್ಥಿಯ ಅಧಿಕೃತ ಘೋಷಣೆ ಮಾಡಿಲ್ಲ. ಭಾನುವಾರ ಶೃಂಗೇರಿಯಲ್ಲಿ ನಡೆಯುವ ಜೆಡಿಎಸ್ ಸಭೆಯಲ್ಲಿ ಹಿಂದಿನ ಅಭ್ಯರ್ಥಿ ಎಚ್.ಟಿ. ರಾಜೇಂದ್ರ ಪಾಲ್ಗೊಳ್ಳಲಿದ್ದು, ಇಲ್ಲಿನ ಅಭ್ಯರ್ಥಿ ಆಯ್ಕೆ ಬಗ್ಗೆ ನಿರ್ಧರಿಸಲಾಗುವುದು. ರಾಜೇಂದ್ರ 2 ಬಾರಿ ಸ್ಪರ್ಧಿಸಿ ಸೋತಿದ್ದರು. ಎಚ್.ಜಿ.ವೆಂಕಟೇಶ್ ಇತ್ತೀಚೆಗೆ ಪಕ್ಷಕ್ಕೆ ಸೇರಿದ್ದಾರೆ. ಅವರ ತಂದೆ ಗೋವಿಂದೇ ಗೌಡ ನಮ್ಮ ಒಡನಾಡಿಯಾಗಿದ್ದರು. ನಮ್ಮ ಸರ್ಕಾರದಲ್ಲಿ ಒಳ್ಳೆಯ ಆಡಳಿತ ನೀಡಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.