ಆಲ್ದೂರು: ಇಲ್ಲಿಗೆ ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಭೂತನಕಾಡು ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ ನಿರ್ಮಿಸಲಾದ 5 ವಾಣಿಜ್ಯ ಸಂಕೀರ್ಣ ಮಳಿಗೆಗಳ ಲೋಕಾರ್ಪಣೆ ಕಾರ್ಯಕ್ರಮ ಸೋಮವಾರ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸತ್ತಿಹಳ್ಳಿ ಪಂಚಾಯಿತಿ ಅಧ್ಯಕ್ಷ ಧ್ರುವ ಕುಮಾರ್ ಅವರು ಭೂತನಕಾಡಿನಲ್ಲಿ ಹಲವು ವರ್ಷಗಳ ಹಿಂದೆ ಪ್ರಾರಂಭವಾದ ಮಳಿಗೆಗಳ ಕಾಮಗಾರಿ, ಅನುದಾನವಿಲ್ಲದೆ ಸ್ಥಗಿತ, ಉಂಟಾದ ಅಡೆತಡೆಗಳು, ಪಂಚಾಯಿತಿ, ಇನ್ನಿತರ ಮೂಲಗಳಿಂದ ದೊರೆತ ಅನುದಾನದ ಮಾಹಿತಿ ನೀಡಿದರು. ನಿರ್ಮಾಣಕ್ಕೆ ₹22 ಲಕ್ಷ ವೆಚ್ಚವಾಗಿದೆ ಎಂದು ತಿಳಿಸಿದರು.
ಬೆಳಗಾರರ ಒಕ್ಕೂಟದ ನಿರ್ದೇಶಕ ಅಶೋಕ್ ಸೂರಪ್ಪನಹಳ್ಳಿ ಮಾತನಾಡಿ, ಹಲವು ದಶಕಗಳ ಬಳಿಕ ಸದೃಢ, ಗುಣಮಟ್ಟದ ಮಳಿಗೆಗಳು ನಿರ್ಮಾಣವಾಗಿವೆ. ಪಂಚಾಯಿತಿ ಆದಾಯಕ್ಕೆ ಇಂತಹ ಸಂಕೀರ್ಣಗಳು ಮೂಲ. ಪಂಚಾಯಿತಿ ಅಧ್ಯಕ್ಷ ಧ್ರುವ ಕುಮಾರ್, ಸದಸ್ಯರು, ಪಿಡಿಒ ಶಾಂತಿ ಅವರ ಪರಿಶ್ರಮ ಶ್ಲಾಘನೀಯ ಎಂದರು.
ಸ್ಥಳೀಯ ಮುಖಂಡ ಇಸಾಕ್ ಅವರು, ಹಿಂದೆ ಪಂಚಾಯಿತಿಯಲ್ಲಿ ಸದಸ್ಯರಾಗಿದ್ದಾಗ ನವಾಬ್ ಜಾನ್ ಎಂಬುವರಿಂದ ಮಳಿಗೆಯ ಜಾಗವನ್ನು ಪಂಚಾಯಿತಿಗೆ ದೊರಕಿಸಿದ್ದನ್ನು ನೆನಪಿಸಿಕೊಂಡರು.
ಮುಖಂಡರಾದ ರಾಜಶೇಖರ್, ಲೋಕಪ್ಪ ಗೌಡ, ಪುಟ್ಟೇಗೌಡ ಅಭಿಪ್ರಾಯ ಹಂಚಿಕೊಂಡರು. ಗುತ್ತಿಗೆದಾರರಾದ ಮೂಡಿಗೆರೆ ಜೈಪಾಲ್, ಗೆಲ್ಲೇಶ್ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷೆ ತಸ್ನಿಮಾ ನಾಜ್, ಪಿಡಿಒ ಶಾಂತಿ ಎಂ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಂ.ಎನ್, ಮಂಜುನಾಥ್, ಸದಸ್ಯರಾದ ರಾಮಪ್ಪ, ಗುರುವಪ್ಪ, ಪದ್ಮಶ್ರೀ, ರಮ್ಯಾ, ಸುಂದರೇಶ್, ಶಾಹಿರಾ ಬಾನು, ಶಾಂತಾ ಪರಮೇಶ್, ಹೊನ್ನಮ್ಮ, ಮಾಜಿ ಸದಸ್ಯರಾದ ಕುಸುಮಾ, ಸತ್ತಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಘು, ಬಿಜೆಪಿ ಆಲ್ದೂರು ಹೋಬಳಿ ಅಧ್ಯಕ್ಷ ಭೂತನಕಾಡು ನಾಗೇಶ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶಾಹುಲ್, ಸ್ಥಳೀಯ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.