ADVERTISEMENT

ವೈದ್ಯ ಮದ್ಯ ಕುಡಿದ ಆರೋಪ: ವೈದ್ಯಕೀಯ ಪರೀಕ್ಷೆಯೇ ನಡೆದಿಲ್ಲ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 22:38 IST
Last Updated 2 ಜೂನ್ 2023, 22:38 IST

ಚಿಕ್ಕಮಗಳೂರು: ಕಳಸ ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಬಂದಿದ್ದ ವೈದ್ಯ ಬಾಲಕೃಷ್ಣ, ಮದ್ಯ ಕುಡಿದಿದ್ದರು ಎಂಬ ಆರೋಪ ಸತ್ಯವೇ, ಸುಳ್ಳೇ ಎಂಬುದನ್ನು ದೃಢೀಕರಿಸಲು ಅಗತ್ಯವಾಗಿ ಬೇಕಿದ್ದ ವೈದ್ಯಕೀಯ ಪರೀಕ್ಷೆಯೇ ನಡೆದಿಲ್ಲ!

ಸ್ಥಳೀಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಹೇಳಿಕೆ ಆಧರಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್. ಉಮೇಶ್ ಅವರು ವರದಿ ಸಿದ್ಧಪಡಿಸಿದ್ದಾರೆ‌‌. ಅದನ್ನು ಆರೋಗ್ಯ ಇಲಾಖೆ ಆಯುಕ್ತ ಡಿ‌. ರಂದೀಪ್ ಅವರಿಗೆ ಸಲ್ಲಿಸಿದ್ದಾರೆ.

‘ಬಾಲಕೃಷ್ಣ ಅವರಿಗೆ ಎದೆನೋವು ಇದ್ದುದರಿಂದ ಆ ಸಂದರ್ಭದಲ್ಲಿ ತರಾತುರಿ ಇತ್ತು. ಇಸಿಜಿ ಅಷ್ಟೇ ಮಾಡಲಾಗಿದ್ದು, ರಕ್ತ ಪರೀಕ್ಷೆ ಮಾಡಿಲ್ಲ. ಆದ್ದರಿಂದ ರಕ್ತದಲ್ಲಿ ‌ಆಲ್ಕೊಹಾಲ್ ಆಂಶ ಇತ್ತೇ ಇಲ್ಲವೇ ಎಂಬುದನ್ನು ಖಚಿತವಾಗಿ ಹೇಳಲು ಆಗುತ್ತಿಲ್ಲ’ ಎಂದು ಡಿಎಚ್ಒ ಉಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸ್ಥಳೀಯರು ಮತ್ತು ಆಸ್ಪತ್ರೆಯ ಕೆಲ‌ ಸಿಬ್ಬಂದಿಯ ಹೇಳಿಕೆ‌ ಗಮನಿಸಿದಾಗ, ವೈದ್ಯರು ಮದ್ಯ ಕುಡಿದಿರಬಹುದು ಎಂಬ ಅನುಮಾನ ಮೂಡಿದೆ. ಪ್ರಕರಣ ಕುರಿತ ನನ್ನ ಅಭಿಪ್ರಾಯವನ್ನು ವರದಿಯಲ್ಲಿ ತಿಳಿಸಿದ್ದೇನೆ’ ಎಂದರು.

‘ಬಾಲಕೃಷ್ಣ ಅವರು ಈವರೆಗೆ ಕರ್ತವ್ಯದಿಂದ ಅಮಾನತುಗೊಂಡಿಲ್ಲ. ವರದಿ ಆಧರಿಸಿ ಅಮಾನತು ಮಾಡುವುದು ಅಥವಾ ಬಿಡುವುದು ಮೇಲಧಿಕಾರಿಗಳಿಗೆ ಬಿಟ್ಟ ವಿಚಾರ’ ಎಂದು ಸ್ಪಷ್ಟಪಡಿಸಿದರು.

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆಂದು ಬುಧವಾರ ಹಲವು ಮಹಿಳೆಯರು ಬಂದಿದ್ದರು. ಶೃಂಗೇರಿಯಿಂದ ಬಂದಿದ್ದ ವೈದ್ಯ ಬಾಲಕೃಷ್ಣ ಅವರು ಶಸ್ತ್ರಚಿಕಿತ್ಸೆ ಮಾಡಲು ಅಸಮರ್ಥರಾಗಿದ್ದರಿಂದ ಶಸ್ತ್ರಚಿಕಿತ್ಸೆ ರದ್ದಾಗಿತ್ತು. ವೈದ್ಯ ಪಾನಮತ್ತರಾಗಿದ್ದರು ಎಂದು ಸ್ಥಳೀಯರು ಮತ್ತು ರೋಗಿಗಳ ಸಂಬಂಧಿಕರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.