ಆಡುವಳ್ಳಿ (ಎನ್. ಆರ್. ಪುರ): ‘ಅಮೆರಿಕವು ಸ್ವಾತಂತ್ರ್ಯ ಪಡೆದು ದಶಕಗಳು ಕಳೆದ ಬಳಿಕ ಅಲ್ಲಿನ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು. ಆದರೆ, ಭಾರತದಲ್ಲಿ ಸ್ವಾತಂತ್ರ್ಯ ಬಂದ ಮೂರೇ ವರ್ಷದಲ್ಲಿ ಅಂಬೇಡ್ಕರ್ ನೀಡಿದ ಸಂವಿಧಾನದ ಫಲವಾಗಿ ಮಹಿಳೆಯರು ಮತದಾನದ ಹಕ್ಕನ್ನು ಪಡೆದರು. ಇದು ಅಂಬೇಡ್ಕರ್ ಭಾರತೀಯರಿಗೆ ನೀಡಿದ ಮಹತ್ವದ ಕೊಡುಗೆಗೆ ಸಾರ್ವಕಾಲಿಕ ಸಾಕ್ಷಿ’ ಎಂದು ಲೇಖಕ ಎಲ್ದೊ ಹೊನ್ನೇಕೂಡಿಗೆ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಆಡುವಳ್ಳಿ ಗ್ರಾಮದ ಚೌಡಿ ಗದ್ದೆಯಲ್ಲಿ ಸೋಮವಾರ ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಅವರು ಮಾತನಾಡಿದರು.
ಮುಖಂಡ ಕಾರ್ತಿಕ್ ಕಾರ್ಗದ್ದೆ ಮಾತನಾಡಿ, ‘ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿದ ಕೊಡುಗೆ ಅನನ್ಯ. ಅಂಬೇಡ್ಕರ್ ವ್ಯಕ್ತಿಯಲ್ಲ, ಅವರು ಮಹಾ ಶಕ್ತಿಯಾಗಿದ್ದರು’ ಎಂದರು.
ಯುವ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಶ್ರೀಜಿತ್ ಗೌಡ ಮಾತನಾಡಿ, ‘ಏಪ್ರಿಲ್ ಅಂತ್ಯದವರೆಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಗುವುದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್ ಮಾತನಾಡಿ, ‘ನಾವೆಲ್ಲರೂ ಇಂದು ಒಂದಾಗಿ ಬಾಳುತ್ತಿರುವುದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣವಾಗಿದೆ’ ಎಂದರು. ತಾಲ್ಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಿನು ಜೋಸೆಫ್, ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ ಮಾತನಾಡಿದರು.
ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾಚರಣ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜೇಶ್ ಅಭಿಲಾಶ್, ಕೌಶಿಕ್ ಪಟೇಲ್, ತಯೀಬ್, ಮುಖಂಡರಾದ ಸಂದೀಪ್, ಸುಜಿತ್, ಅಶ್ವಲ್, ರಾಶ್ವಿಕ್, ನಿಜಾಮುದ್ದೀನ್, ಪುನೀತ್ ಅಭಿ, ಪ್ರವೀಣ್, ವಿಜಯ್, ರಾಜೇಶ್, ಚನ್ನಪ್ಪ ಗೌಡ್ರು, ದುಗ್ಗಯ್ಯ, ಲಕ್ಷ್ಮಣ, ಬಶೀರ್, ನಿರಂಜನ, ಕಿಶೋರ್, ಕಿರಣ್, ಗಣೇಶ, ಜಯಂತ, ಚಂದ್ರಯ್ಯ, ಸಂದೀಪ ಇದ್ದರು.
ಆಡುವಳ್ಳಿ ಗ್ರಾಮದ ಚೌಡಿ ಗದ್ದೆ ಗ್ರಾಮಸ್ಥರೊಂದಿಗೆ ಜೈ ಭೀಮ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಸಂವಿಧಾನದ ಪ್ರತಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.