ಚಿಕ್ಕಮಗಳೂರು: ತ್ಯಾಗ, ಬಲಿದಾನ ಹಾಗೂ ಭ್ರಾತೃತ್ವದ ಸಂಕೇತವಾದ ಈದ್–ಉಲ್ ಅಝಾಹ್(ಬಕ್ರೀದ್) ಹಬ್ಬವನ್ನು ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಶನಿವಾರ ಆಚರಿಸಲಾಯಿತು.
ಶ್ವೇತವಸ್ತ್ರ ತೊಟ್ಟು ಮಸೀದಿ, ಈದ್ಗಾ ಮೈದಾನಗಳಿಗೆ ತಂಡೋಪ ತಂಡವಾಗಿ ಬಂದ ಮುಸ್ಲಿಮರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೌಲ್ವಿಗಳು ಸಂದೇಶ ಮತ್ತು ಪ್ರವಚನ ನೀಡಿದರು.
ಪ್ರಾರ್ಥನೆ ಮುಗಿಸಿದ ನಂತರ ಖಬರಸ್ತಾನಕ್ಕೆ ತೆರಳಿ, ಗೋರಿಗಳಿಗೆ ಹೂ ಸಮರ್ಪಿಸಿದರು. ಹಿರಿಯರನ್ನು ಸ್ಮರಿಸಿದರು. ತಪ್ಪುಗಳನ್ನು ಕ್ಷಮಿಸಿ, ಒಳಿತು ಮಾಡುವಂತೆ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಮುಗಿಸಿದ ಬಳಿಕ ಪರಸ್ಪರ ಆಲಂಗಿಸಿ ಶುಭಾಶಯ ಹಂಚಿಕೊಂಡರು.
‘ಬಡವರು, ನೆರೆಹೊರೆಯವರು, ಸಂಬಂಧಿಕರಿಗೆ ಕುರಬಾನಿ ಹಂಚುವುದು ಈ ಹಬ್ಬದ ವಿಶೇಷ. ಬಿರಿಯಾನಿ, ಪಾಯಸ, ಜಾಮೂನು, ಹಣ್ಣುಗಳಿಂದ ತಯಾರಿಸಿದ ಕಸ್ಟಡ್, ಶಾವಿಗೆ ಸೇರಿ ಬಗೆ ಬಗೆಯ ಖಾದ್ಯ ಸಿದ್ಧಪಡಿಸಿಕೊಂಡು ಸವಿಯುವುದು ಎಲ್ಲರ ಮನೆಯಲ್ಲೂ ಸಾಮಾನ್ಯ’ ಎಂದು ಗೌರಿಕಾಲುವೆ ಬಡಾವಣೆಯ ಸೈಯದ್ ಹೇಳಿದರು.
ಮಸೀದಿ ರಸ್ತೆಗಳಲ್ಲಿ ವಾಹನ, ಜನ ದಟ್ಟಣೆ ಇತ್ತು. ನಗರದ ಪ್ರಮುಖ ವೃತ್ತಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.